ದೇವರಹಿಪ್ಪರಗಿ: ಕಂಪ್ಯೂಟರ್ ಕಲಿಕೆಯೊಂದಿಗೆ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುವ ಪಾಠ, ನಡುವೆ ಊಟ, ಬಿಡುವಿನ ವೇಳೆ ಜಾರುಬಂಡಿ ಆಟ...
ಇಂಥ ಚಟುವಟಿಕೆಗಳಿಂದ ವರ್ಕಾನಹಳ್ಳಿ ಗ್ರಾಮದ ನಮ್ಮೂರು ಆದರ್ಶ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆಯುತ್ತಿದೆ. ವನಸಿರಿ ತಾಣವಾಗಿಯೂ ಗುರುತಿಸಿಕೊಂಡಿದೆ.
‘ಹಸಿರು ಮರಗಳ ಆವರಣದಿಂದ ಕಂಗೊಳಿಸುವ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ 68 ಗಂಡು, 61 ಹೆಣ್ಣು ಮಕ್ಕಳು ಸಹಿತ ಒಟ್ಟು 129 ಮಕ್ಕಳು ಓದುತ್ತಿದ್ದಾರೆ. ಮಕ್ಕಳ ಪಾಠಕ್ಕಾಗಿ ಒಟ್ಟು 5 ವರ್ಗಕೋಣೆಗಳಿದ್ದು, 6 ಜನ ಶಿಕ್ಷಕರು ಇದ್ದಾರೆ. ಜೊತೆಗೆ ಮಕ್ಕಳ ಮನರಂಜನೆಗಾಗಿ ಜಾರು ಬಂಡೆಯಿದ್ದು, ಪಾಠದ ಬಿಡುವಿನ ವೇಳೆ ಮಕ್ಕಳು ಆಟವಾಡಲು ಸಹಕಾರಿಯಾಗಿದೆ’ ಎಂದು ಶಾಲೆಯ ಮುಖ್ಯಶಿಕ್ಷಕ ಎಂ.ಎನ್.ದೇವಣಗಾಂವ ಹೇಳುತ್ತಾರೆ.
ತಾಲ್ಲೂಕಿನ ಅದೆಷ್ಟೋ ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿ, ಹಾಜರಾತಿಗಳಂತಹ ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಮ್ಮ ಶಾಲೆ ಮಾತ್ರ ಇವುಗಳಿಂದ ಮುಕ್ತವಾಗಿದೆ. 2004-05, 2006-07ನೇ ಶೈಕ್ಷಣಿಕ ವರ್ಷಗಳಲ್ಲಿ ಶೇ100 ದಾಖಲಾತಿ, ಶೇ100 ಹಾಜರಾತಿ, ಶೇ87.57ರಷ್ಟು ಕಲಿಕಾ ಸಾಮಥ್ರ್ಯದ ಆಧಾರದ ಮೇಲೆ ಕಲಿಕಾ ಖಾತ್ರಿ ಶಾಲೆಯಾಗಿ ಹೊರಹೊಮ್ಮಿದೆ.
2016-17, 2017-18 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದ ‘ಹಸಿರು ಶಾಲೆ’ ಪ್ರಶಸ್ತಿಗೆ ಭಾಜನವಾಗಿದೆ. 2018-19 ನೇ ಸಾಲಿನ ಪ್ರತಿಭಾ ಕಾರಂಜಿಯಲ್ಲಿ ಕೋಲಾಟದಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಹಾಗೂ ಮೋರಟಗಿಯಲ್ಲಿ ಜರುಗಿದ ಸೇವಾದಳದ ಕಾರ್ಯಕ್ರಮದಲ್ಲಿ ಧ್ವಜ ನಿಶಾನೆ ಚಟುವಟಿಕೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
‘ನಮ್ಮ ಶಾಲೆಯಲ್ಲಿ ಪ್ರತಿ ಶನಿವಾರ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತಿದೆ. ಅಲ್ಲದೇ, ಪ್ರತಿ ತಿಂಗಳ 3ನೇ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅಂದು ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ’ ಎಂದು ಶಿಕ್ಷಕರಾದ ಎನ್.ಡಿ.ನಾದ, ಬಿ.ಎಸ್.ಕೊಟಾರಗಸ್ತಿ, ವಿ.ಎಂ.ಚೌಧರಿ, ಜಿ.ಆರ್.ಕಾಖಂಡಕಿ, ಜೆ.ಎಸ್.ಪಾಟೀಲ ಹೆಮ್ಮೆಯಿಂದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.