ವಿಜಯಪುರ: ಬಿಜೆಪಿ ನಗರ ಘಟಕ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ‘ಸೇವಾ ಸಪ್ತಾಹ’ ಕಾರ್ಯಕ್ರಮದ ಮೂಲಕ ಹೆರಿಗೆ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಹಣ್ಣು ಮತ್ತು ಬಿಸ್ಕತ್ ವಿತರಿಸಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ‘ಪಕ್ಷದ ಸೂಚನೆ ಮೇರೆಗೆ ಈ ವರ್ಷವೂ ಸೇವಾ ಸಪ್ತಾಹ ಕಾರ್ಯಕ್ರಮವನ್ನು ವಾರದವರೆಗೆ ನಡೆಸಲು ನಿರ್ಧರಿಸಲಾಗಿದೆ. ಸೇವಾ ಸಪ್ತಾಹ ಯಶಸ್ವಿಗೊಳಿಸಲು ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಅನೀಲ ಜಮಾದಾರ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಗಿದೆ’ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ‘ನರೇಂದ್ರ ಮೋದಿ ಅತ್ಯಂತ ಆತ್ಮೀಯ ವ್ಯಕ್ತಿ. ಮಗುವಿನಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರನ್ನು ತಲುಪಿರುವ ಪ್ರಧಾನಿ’ ಎಂದು ಬಣ್ಣಿಸಿದರು.
ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ ಮಾತನಾಡಿ, ‘ಸೇವಾ ಸಪ್ತಾಹ ಅಂಗವಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೆ.17ರಂದು ಬೆಳಿಗ್ಗೆ 11.30 ಗಂಟೆಗೆ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಚಿದಾನಂದ ಚಲವಾದಿ, ಭಿಮಾಶಂಕರ ಹದನೂರ, ಜಿಲ್ಲಾ ಪಂಚಾಯಿತಿ ಸದಸ್ಯ ನವೀನ ಅರಕೇರಿ, ರಾಹುಲ ಜಾಧವ, ಮಲ್ಲಮ್ಮ ಜೋಗೂರ, ಗೀತಾ ಕುಗನೂರ, ಪ್ರಮೋದ ಬಡಿಗೇರ, ಬಸವರಾಜ ಬೈಚಬಾಳ, ಪಾಪುಸಿಂಗ ರಜಪೂತ, ಉಮೇಶ ವಂದಾಲ, ರಾಜು ವಾಲಿ, ಕಾಂತು ಸಿಂಧೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.