
ನಿಡಗುಂದಿ: ಜಿಲ್ಲೆಯ 2ನೇ ಅತಿದೊಡ್ಡ ಕೆರೆ ಇರುವ ತಾಲ್ಲೂಕಿನ ಅರೇಶಂಕರ ಗ್ರಾಮದಲ್ಲಿ ಭಾನುವಾರ ಮೊಸಳೆ ಪ್ರತ್ಯಕ್ಷವಾಗಿ ರೈತರಲ್ಲಿ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು.
ಅರೇಶಂಕರ ಗ್ರಾಮದ ರೈತ ಚನ್ನಪ್ಪ ಚಲವಾದಿ ಅವರು ಭಾನುವಾರ ರಾತ್ರಿ ಹೊಲಕ್ಕೆ ನೀರುಣಿಸಲು ಹೋಗುವ ವೇಳೆ ರಸ್ತೆ ಮೇಲಿದ್ದ ಸುಮಾರು 5 ಅಡಿ ಉದ್ಧದ ಮೊಸಳೆಯನ್ನು ಕಂಡು ಭಯಭೀತರಾಗಿ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಹಾಗೂ ಮುದ್ದೇಬಿಹಾಳ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಮತ್ತು ಮೊಸಳೆ ರಕ್ಷಕ ನಾಗೇಶ್ ಮೋಪಗಾರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಹಕಾರದೊಂದಿಗೆ ಮೊಸಳೆ ಸೆರೆ ಹಿಡಿದು ಕೃಷ್ಣಾ ನದಿ ಹಿನ್ನೀರಿನಲ್ಲಿ ಬಿಟ್ಟಿದ್ದಾರೆ.
ಜಿಲ್ಲೆಯ ಎರಡನೇ ದೊಡ್ಡ ಕೆರೆ ಎಂದು ಖ್ಯಾತಿ ಇರುವ ಅರೇಶಂಕರ ಕೆರೆಯಲ್ಲಿ ಮೊಸಳೆಗೆಳ ಸಂತತಿ ಹೆಚ್ಚಾಗಿದೆ. ಇಲ್ಲಿ ಗ್ರಾಮದ ಮಹಿಳೆಯರು ಬಟ್ಟೆ ತೊಳೆಯಲು, ರೈತರು ಜಾನುವಾರುಗಳಿಗೆ ನೀರು ಕುಡಿಸಲು ಕೆರೆಗೆ ಬರುತ್ತಿದ್ದು, ಕರೆಗೆ ಯಾವುದೇ ಸುರಕ್ಷತಾ ಬೇಲಿಯಾಗಲಿ, ಎಚ್ಚರಿಕೆ ನಾಮಫಲಕವಾಗಲಿ ಅಳವಡಿಸಿಲ್ಲ. ಶಾಸಕ ರಾಜುಗೌಡ ಪಾಟೀಲ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರೇಶಂಕರ ಗ್ರಾಮದ ಮುಖಂಡ ಬಸವರಾಜ ಸಜ್ಜನ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ, ವಲಯ ಅರಣ್ಯ ಅಧಿಕಾರಿ ಬಸನಗೌಡ ಬಿರಾದಾರ, ಗಸ್ತು ಅರಣ್ಯ ಪಾಲಕ ಈಶ್ವರಯ್ಯ ಹೀರೆಮಠ, ಮುತ್ತು ಮಾದಾರ, ಮೊಸಳೆ ರಕ್ಷಕ ನಾಗೇಶ್ ಮೋಪಗಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.