ಆಲಮಟ್ಟಿ: ಇಲ್ಲಿನ ಜಲಾಶಯದಿಂದ ಭಾನುವಾರದಿಂದ ಹೊರಬಿಟ್ಟಿದ್ದ 1.20 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟೇ ನೀರನ್ನು ಸೋಮವಾರವೂ ಹೊರಹರಿಸಲಾಗಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಒಳಹರಿವು ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಒಳಹರಿವು ಕೂಡಾ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ 1,07,573 ಕ್ಯೂಸೆಕ್ ಇದ್ದ ಒಳಹರಿವು ಸಂಜೆ 1,05,388 ಕ್ಯೂಸೆಕ್ಗೆ ಇಳಿಕೆಯಾಗಿದೆ.
ಸದ್ಯಕ್ಕಿಲ್ಲ ನೆರೆ ಆತಂಕ: ‘ಒಳಹರಿವು ಕಡಿಮೆಯಾಗುತ್ತಿದ್ದು, ಸದ್ಯಕ್ಕೆ ಹೊರಹರಿವು ಹೆಚ್ಚು ಮಾಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಆಲಮಟ್ಟಿ ಜಲಾಶಯದಿಂದ 3.5 ಲಕ್ಷ ಕ್ಯೂಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸಿದಾಗ ಮಾತ್ರ ಜಲಾಶಯದ ತಳಪಾತ್ರದಲ್ಲಿ ಹೊಲ, ಗದ್ದೆಗಳು ಜಲಾವೃತಗೊಳ್ಳುತ್ತವೆ. ಜಿಲ್ಲೆಯಲ್ಲಿ ಭೀಮೆ ಉಕ್ಕಿ ಹರಿಯುತ್ತಿದ್ದರೂ, ಕೃಷ್ಣೆ ಶಾಂತವಾಗಿದೆ. ಹೀಗಾಗಿ ಸದ್ಯಕ್ಕೆ ನೆರೆಯ ಆತಂಕ ಇಲ್ಲ ಎಂದು ಜಲಾಶಯದ ಮೂಲಗಳು ತಿಳಿಸಿವೆ.
519.60 ಮೀಟರ್ ಎತ್ತರದ ಜಲಾಶಯದಲ್ಲಿ 519.52 ಮೀ.ವರೆಗೆ ನೀರು ಸಂಗ್ರಹಿಸಲಾಗಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 121.606 ಟಿಎಂಸಿ ಅಡಿ ನೀರು ಸಂಗ್ರಹವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.