ಆಲಮಟ್ಟಿ: ಇಲ್ಲಿನ ಜಲಾಶಯದ ಒಳಹರಿವಿಗಿಂತ ಹೊರಹರಿವನ್ನು ಕಡಿಮೆ ಮಾಡಲಾಗಿದ್ದು, ನೀರಿನ ಮಟ್ಟ ಏರುತ್ತಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಹಾಗೂ ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಕ್ರಮೇಣ ಕಡಿಮೆಯಾಗುತ್ತಿದೆ. ಭಾನುವಾರ ಆಲಮಟ್ಟಿ ಜಲಾಶಯದ ಒಳಹರಿವು 3,10,556 ಕ್ಯುಸೆಕ್ ಇತ್ತು. ಮೂರು ದಿನಗಳ ಹಿಂದೆ 3.5 ಲಕ್ಷ ಕ್ಯುಸೆಕ್ ಹೊರಹರಿವು ಇದ್ದ ಕಾರಣ ನೀರಿನ ಸಂಗ್ರಹ ಮಟ್ಟ ಬಹುತೇಕ ಅರ್ಧಕ್ಕೆ ಬಂದು ತಲುಪಿತ್ತು.
ಶುಕ್ರವಾರ ಹೊರಹರಿವನ್ನು 3 ಲಕ್ಷ ಕ್ಯುಸೆಕ್ಗೆ ಇಳಿಸಲಾಗಿತ್ತು. ಭಾನುವಾರ ಮತ್ತಷ್ಟು ಕಡಿಮೆ ಮಾಡಿ, 2.50 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರದಿಂದ ಬಿಡಲಾಗುತ್ತಿದೆ. ಇದರಿಂದ ಜಲಾಶಯದ ಮಟ್ಟ 516.26 ಮೀ.ಗೆ ಏರಿಕೆಯಾಗಿದೆ.
123 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 75.8 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ. ಸದ್ಯ ಶೇ 61ರಷ್ಟು ಮಾತ್ರ ಭರ್ತಿಯಾಗಿದ್ದು, ಹಂತ ಹಂತವಾಗಿ ಹೊರಹರಿವನ್ನು ಕಡಿಮೆ ಮಾಡಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.