ವಿಜಯಪುರ: ಸಾರ್ವಜನಿಕ ಗಜಾನನ ಉತ್ಸವ ಆಚರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಶ್ರೀ ಗಜಾನನ ಉತ್ಸವ ಮಹಾ ಮಂಡಳ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ,ಹಿಂದೂಗಳ ಪವಿತ್ರ ಹಬ್ಬವಾದ ಗಜಾನನ ಉತ್ಸವಕ್ಕೆ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಬಂಧ ವಿಧಿಸಬಾರದು. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹಾಕಿರುವುದನ್ನು ಗಜಾನನ ಉತ್ಸವ ಮಹಾಮಂಡಳವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಕಳೆದ ಬಾರಿ ಕೋವಿಡ್ ಒಂದನೇ ಅಲೆ ತೀವ್ರವಾಗಿ ಇದ್ದರೂ ಕೂಡ ಶ್ರೀ ಗಜಾನನ ಉತ್ಸವ ಮಹಾಮಂಡಳದ ಮನವಿಯ ಮೇರೆಗೆ ರಾಜ್ಯ ಸರ್ಕಾರವು ಸರಳ ರೀತಿಯಲ್ಲಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಿದ್ದು, ಈ ಬಾರಿಯ ಕೂಡಾ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಲು ಅನುಮತಿ ನೀಡಬೇಕು ಎಂದರು.
ಹಬ್ಬವನ್ನು ಕಾನೂನಿನ ಚೌಕಟ್ಟಿನಲ್ಲಿ ಸರಳ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿ ಪರಸ್ಪರ ಅಂತರ ಕಾಪಾಡಿಕೊಂಡು ಯಾವುದೇ ಮೆರವಣಿಗೆ ಮತ್ತು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಇಲ್ಲದೇ ಆಚರಿಸಲು ಅನುಮತಿ ನೀಡಬೇಕು ಎಂದು ಹೇಳಿದರು.
ಮಾಜಿ ಉಪ ಮಹಾಪೌರ ಗೋಪಾಲ ಘಟಕಾಂಬಳೆ, ವಿಜು ಕೋಹಳ್ಳಿ, ಶಿವಾಜಿ ಪಾಟೀಲ, ಸತೀಶ ಪಾಟೀಲ, ಮಹೇಶ ಜಾಧವ, ಪ್ರಭಾಕರ ಭೋಸಲೆ, ಸಿದ್ದು ಮಲ್ಲಿಕಾರ್ಜುನಮಠ, ವಿನಾಯಕ ದಹಿಂಡೆ, ಜಗದೀಶ ಮುಚ್ಚಂಡಿ, ಗುರು ದೇಶಪಾಂಡೆ, ರಾಜು ಹುನ್ನೂರ, ಕಾಂತು ಶಿಂಧೆ, ಸನ್ನಿ ಗವಿಮಠ, ಸತೀಶ ಪೀರನಾಯಕ, ನಿತೀನ ಜಗದಾಳೆ, ರಾಜು ಸೂರ್ಯವಂಶಿ, ಸಂತೋಷ ಬೂದಿಹಾಳ,ರಾಹುಲ ಮಾನೆ, ಅಭಿಷೇಕ ಸಾವಂತ, ಸಚಿನ ಅಡಕಿ, ಅರುಣ ಕುಲಕರ್ಣಿ, ರಾಮಚಂದ್ರ ಚವ್ಹಾಣ, ಮಂಜುಕಡಪಟ್ಟಿ, ಶಿವು ಅಗಸರ, ಪ್ರಪುಲ ಪವಾರ, ಮಾರುತಿ ಮೋರೆ, ಜಿತ್ತು ಮುಪ್ಪಯ್ಯನಮಠ, ವಿನೋದ ಉಪಸ್ಥಿತರಿದ್ದರು.
***
ಪ್ರತಿ ವರ್ಷದಂತೆ ಈ ವರ್ಷವೂ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಮತ್ತು ಬಡಾವಣೆಗಳಲ್ಲಿ ಗಜಾನನ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು
- ಅಪ್ಪಾಸಾಹೇಬ ಪಟ್ಟಣಶೆಟ್ಟಿ,ಮಾಜಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.