ADVERTISEMENT

ರಸ್ತೆ ಅಪಘಾತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:32 IST
Last Updated 14 ಫೆಬ್ರುವರಿ 2026, 7:32 IST
ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ವಿಜಯಪುರ ನಗರದ ಬಲರಾಮ ಕೃಷ್ಣ ಬಾಗಲಕೋಟ ಅವರ ಅಂಗಾಂಗಳನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದರು 
ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ವಿಜಯಪುರ ನಗರದ ಬಲರಾಮ ಕೃಷ್ಣ ಬಾಗಲಕೋಟ ಅವರ ಅಂಗಾಂಗಳನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದರು    

ವಿಜಯಪುರ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಪ್ರಕ್ರಿಯೆ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆಯಿತು.

ವಿಜಯಪುರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲಕೋಟ (30) ಫೆಬ್ರುವರಿ 9ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಬಿ.ಎಲ್.ಡಿ.ಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು.

ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಯುವಕನ ಸಂಬಂಧಿಕರಿಗೆ ತಿಳಿಸಿದರು. ಅಲ್ಲದೇ, ಅವರ ಕುಟುಂಬದವರಿಗೆ ಅಂಗಾಂಗ ದಾನದ ಮಹತ್ವ ತಿಳಿಸಿದರು. ಮಾನವೀಯತೆ ಆಧಾರದ ಮೇಲೆ ಬಲರಾಮ ಬಾಗಲಕೋಟ ಅವರ ಅಂಗಾಂಗಗಳನ್ನು ದಾನ ಮಾಡುವುದರಿಂದ ಈ ಅಂಗಾಂಗಗಳು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲು ಸಹಕರಿಸಲು ಮನವರಿಕೆ ಮಾಡಿಕೊಟ್ಟರು‌. ಇದಕ್ಕೆ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದರು.

ADVERTISEMENT

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೋಂದಣಿ ಮಾಡಿದ್ದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗೆ ಬಲರಾಮ ಕೃಷ್ಣ ಬಾಗಲಕೋಟ ಅವರ ಒಂದು ಕಿಡ್ನಿ ಕಸಿ ಮಾಡಲು ನಿರ್ಧರಿಸಿದರು. ಮತ್ತೊಂದು ಕಿಡ್ನಿಯನ್ನು ಕಲಬುರಗಿಯ ರೋಗಿಯೊಬ್ಬರಿಗೆ ಕಸಿ ಮಾಡಲು ಕಳುಹಿಸಿಕೊಡಲು ನಿರ್ಧರಿಸಲಾಯಿತು.

ಅದರಂತೆ ಗುರುವಾರ ಬಲರಾಮ ಕೃಷ್ಣ ಬಾಗಲಕೋಟ ಅವರ ಅಂಗಾಂಗಳನ್ನು ಕಸಿಗಾಗಿ ತೆಗೆಯಲಾಯಿತು. ಒಂದು ಕಿಡ್ನಿಯನ್ನು ವಿಜಯಪುರದಿಂದ ಕಲಬುರಗಿ ವರೆಗೆ ಝೀರೋ ಟ್ರಾಫಿಕ್‌ನಲ್ಲಿ ಕಳುಹಿಸಿ ಕೊಡಲಾಯಿತು. ಅಲ್ಲದೇ, ಇನ್ನೊಂದು ಕಿಡ್ನಿಯನ್ನು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ಮತ್ತೊಬ್ಬ ರೋಗಿಗೆ ಅಳವಡಿಸಲಾಯಿತು.

ಅಂಗಾಂಗಗಳನ್ನು ಬೇರ್ಪಡಿಸಿದ ಬಳಿಕ ಬಲರಾಮ ಕೃಷ್ಣ ಬಾಗಲಕೋಟ ಅವರ ಸಹೋದರಿಯರಾದ ಶೃತಿ ಹಳ್ಳದಮನಿ, ರೂಪಾ, ಸಹೋದರ ಪರಶುರಾಮ ಕೃಷ್ಣ ಬಾಗಲಕೋಟ, ಮಾವಂದಿರಾದ ಕಾಶೀನಾಥ ಹಾಗೂ ಶ್ರವಣಕುಮಾರ ಅವರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪುಗೊಳ, ಬಲರಾಮ ಕೃಷ್ಣ ಬಾಗಲಕೋಟ ಅವರ ಎರಡು ಕಿಡ್ನಿಗಳು ಮತ್ತು ಎರಡು ಕಣ್ಣಿನ ಕಾರ್ನಿಯಾಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಒಂದು ಕಿಡ್ನಿಯನ್ನು ಕಲಬುರಗಿಯ ರೋಗಿಗೆ ಮತ್ತು ಇನ್ನೊಂದು ಕಿಡ್ನಿಯನ್ನು ಬಿ.ಎಲ್.ಡಿ.ಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಎರಡು ಕಾರ್ನಿಯಾಗಳನ್ನು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗುವುದು ಎಂದು ತಿಳಿಸಿದರು.

ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ತುರ್ತು ಚಿಕಿತ್ಸೆ ಘಟಕದ ಆಡಳಿತಾಧಿಕಾರಿ ಡಾ.ಶರಣಪ್ಪ ಕಟ್ಟಿ, ಫಾರೆನಿಸಿಕ್ ಮೆಡಿಸಿನ್ ತಜ್ಞ ಡಾ.ಉದಯಕುಮಾರ ನುಚ್ಚಿ, ಡಾ.ಸಂತೋಷ ಗಲಗಲಿ, ಡಾ.ಉಮೇಶ, ಡಾ.ಸಂತೋಷ ಪಾಟೀಲ, ಡಾ.ಸಂದೀಪ ಪಾಟೀಲ, ಡಾ.ಬಸವರಾಜ ಸಜ್ಜನ, ಅಂಗಾಂಗ ದಾನ ಆಪ್ತ ಸಮಾಲೋಚಕ ಶಾಂತೇಶ ಸಲಗರೆ ಇದ್ದರು.

ಬಲರಾಮ ಬಾಗಲಕೋಟ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು ಅವರ ಅಂಗಾಂಗಗಳು ಅನೇಕರ ಬಾಳಿಗೆ ವರದಾನವಾಗಿದ್ದಾರೆ. ಕುಟುಂಬಸ್ಥರು ನೋವಿನಲ್ಲೂ ಇತರರಿಗೆ ಮಾದರಿಯಾಗಿದ್ದಾರೆ.
– ಡಾ.ತೇಜಶ್ವಿನಿ ವಲ್ಲಭ, ಪ್ರಾಚಾರ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.