ADVERTISEMENT

ಸಾವಯವ ಬೆಲ್ಲ | ಭರ‍ಪೂರ ಆದಾಯ: ಯುವ ರೈತರಿಗೆ ಮಾದರಿ ಖೇಡಗಿ ರೈತ

ಎ.ಸಿ.ಪಾಟೀಲ
Published 29 ನವೆಂಬರ್ 2024, 6:01 IST
Last Updated 29 ನವೆಂಬರ್ 2024, 6:01 IST
ಪ್ರಸಕ್ತ ವರ್ಷದಲ್ಲಿ ಸಿದ್ದಗೊಳಿಸಿರುವ ವಿವಿಧ ಬೆಲ್ಲದ ಅಚ್ಚುಗಳು
ಪ್ರಸಕ್ತ ವರ್ಷದಲ್ಲಿ ಸಿದ್ದಗೊಳಿಸಿರುವ ವಿವಿಧ ಬೆಲ್ಲದ ಅಚ್ಚುಗಳು   

ಇಂಡಿ: ತಾಲ್ಲೂಕಿನ ಖೇಡಗಿ ಗ್ರಾಮದ ರೈತ ಶರಣಪ್ಪ ಮಜ್ಜಗಿ ಮತ್ತು ಅವರ ಪತ್ನಿ ರೇವತಿ ಅವರು ಜೊತೆಗೂಡಿ ತಮ್ಮ 4.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡಿ, ಪ್ರತಿ ವರ್ಷ ಲಕ್ಷ ಲಕ್ಷ ಆದಾಯ ತೆಗೆಯುತ್ತಿದ್ದಾರೆ.

ಒಂದು ಎಕರೆ ಜಮೀನಿನಲ್ಲಿ ಬೆಳೆಯುತ್ತಿರುವ ಕಬ್ಬಿನಿಂದ ಸಾವಯವ ಬೆಲ್ಲ ಸಿದ್ದಪಡಿಸುತ್ತಿದ್ದಾರೆ. ಸಾವಯವದಲ್ಲಿಯೇ 3 ಪ್ರಕಾರದ ಬೆಲ್ಲ ತಯಾರಿಸುತ್ತಾರೆ. ಸಾದಾ ಸಾವಯವ ಬೆಲ್ಲ ತಯಾರಿಸಿ ಪ್ರತಿ ಕೆ.ಜಿ ಬೆಲ್ಲವನ್ನು ₹80ಕ್ಕೆ ಮಾರಾಟ ಮಾಡುತ್ತಿದ್ದಾರೆ. ಜಾಜೀಕಾಯಿ ಬೆಲ್ಲ ತಯಾರಿಸಿ,  ಕೆಜಿಗೆ ₹100 ರಂತೆ ಮಾರಾಟ ಮಾಡುತ್ತಾರೆ. 

ಶುದ್ಧ ಆಕಳ ತುಪ್ಪ, ಹಸಿಸುಂಟಿ ಮತ್ತು ಯಾಲಕ್ಕಿ ಸೇರಿಸಿ ಮಸಾಲೆ ಬೆಲ್ಲ ತಯಾರಿಸಿ ಕೆ.ಜಿಗೆ ₹120 ರಂತೆ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ಕಂಡುಕೊಂಡಿದ್ದಾರೆ.

ADVERTISEMENT

ಇನ್ನುಳಿದ ಜಮೀನಿನಲ್ಲಿ ತೊಗರಿ, ನವಣಿ, ಸೋಯಾಬೀನ್, ಅರಿಸಿಣ, ಉಳ್ಳಾಗಡ್ಡಿ, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ತೆಗೆಯುತ್ತಾರೆ.

ಕಬ್ಬಿನಲ್ಲಿ ಕಡಲೆ, ಶೇಂಗಾ, ಉಳ್ಳಾಗಡ್ಡಿ ಅಂತರ್ ಬೇಸಾಯ ಮಾಡಲಾಗುತ್ತದೆ. ತೊಗರಿಯಲ್ಲಿ ಸೋಯಾಬೀನ್, ಸೂರ್ಯಪಾನ, ನವಣಿ ಮುಂತಾದ ಬೆಳೆಗಳನ್ನು ಅಂತರ್ ಬೇಸಾಯದಿಂದ ಬೆಳೆಯುತ್ತಾರೆ.

ಅರ್ಧ ಎಕರೆಯಲ್ಲಿ ಅರಿಸಿಣ ಬೆಳೆದು ಅದನ್ನು ಒಂದು ಚಿಕ್ಕ ಮಷಿನ್ ಮೂಲಕ ಅರ್ಧ ಅರ್ಧ ಸೀಳಿ, ಒಣಗಿಸಿ ಫೌಡರ್ ಮಾಡಿ 1 ಕೆಜಿ ಅರಿಶಿಣ ಫೌಡರಿಗೆ ₹200ರಂತೆ ಮಾರಾಟ ಮಾಡುತ್ತಾರೆ. ಇನ್ನುಳಿದ ಅಂತರ್ ಬೇಸಾಯದಿಂದ ಬೆಳೆದ ಸಾವಯವ ಧಾನ್ಯಗಳನ್ನು ಮನೆಗೆ ಬಳಸಿ, ಹೆಚ್ಚಾದದ್ದನ್ನು ಮಾರಾಟ ಮಾಡುತ್ತಾರೆ.

‘ಸಾವಯವ ಕೃಷಿಗೆ ಆಧಾರವಾಗಿರುವುದು 4 ಜವಾರಿ ಆಕಳು, ಒಂದು ಹೋರಿ ಮತ್ತು ಕರುಗಳು. 4.5 ಎಕರೆ ಜಮೀನಿಗೆ ಅಗತ್ಯವಿರುವಷ್ಟು ಗೊಬ್ಬರ ಈ ಆಕಳುಗಳಿಂದ ಸಿಗುತ್ತದೆ. ಆಕಳುಗಳ ಗೊಬ್ಬರದಿಂದ ಜೀವಾಮೃತ, ಡಿ ಕಾಂಪೋಸ್ಟ್‌ ಗೊಬ್ಬರ ಸಿದ್ದ ಮಾಡುತ್ತೇವೆ. ಇದನ್ನೇ ಬೆಳೆಗಳಿಗೆ ಉಪಯೋಗಿಸುತ್ತೇವೆ. ಗೊಬ್ಬರಕ್ಕೆ ಯಾವುದೇ ಖರ್ಚು ವೆಚ್ಚ ಮಾಡುವುದಿಲ್ಲ’ ಎಂದು ರೈತ ಶರಣಪ್ಪ ಮಜ್ಜಗಿ ಹೇಳುತ್ತಾರೆ.

ಕಬ್ಬಿನ ರಸವನ್ನು ಕಡಾಯಿಯಲ್ಲಿ ಕುದಿಸಿ ಅದರಲ್ಲಿ ಮಸಾಲೆ ಹಾಕಿ ಮಿಶ್ರಣ ಮಾಡಿ ಮಸಾಲೆ ಬೆಲ್ಲ ಸಿದ್ದಗೊಳ್ಳುತ್ತಿರುವುದು 

ರೈತ ಶರಣಪ್ಪ ಮತ್ತು ಅವರ ಪತ್ನಿ ರೇವತಿ ಮಜ್ಜಗಿ ಅವರು ಕಳೆದ 4 ವರ್ಷಗಳಿಂದ ಸಾವಯವ ಕೃಷಿಯಿಂದ ಇಂತಹ ಎಲ್ಲಾ ಪ್ರಯೋಗಗಳನ್ನು ಮಾಡುತ್ತ ಹೆಚ್ಚಿನ ಲಾಭ ಪಡೆದುಕೊಳ್ಳುವುದಲ್ಲದೇ ಮನೆ ಮದ್ದುಗಳನ್ನು ಕೂಡಾ ಸಿದ್ದಗೊಳಿಸಿ, ಗ್ರಾಮೀಣ ರೈತರಿಗೆ ಮಾದರಿಯಾಗಿದ್ದಾರೆ.

ಜವಾರಿ ಆಕಳುಗಳ ಜೊತೆಗೆ ರೈತ ಶರಣಪ್ಪ ಮಜ್ಜಗಿ

ಪ್ರಸಕ್ತ ವರ್ಷ ಸಿದ್ದಗೊಂಡಿರುವ ಸಾವಯವ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಮುಂದಿನ ವರ್ಷದಲ್ಲಿ ಇದನ್ನೇ ಹೆಚ್ಚಿಗೆ ಬೆಳೆಯವ ತವಕದಲ್ಲಿದ್ದಾರೆ. ಸಾವಯವ ಅರಿಸಿಣ ಬೆಳೆಯಿಂದಲೂ ಕೂಡಾ ಗ್ರಾಹಕರಿಗೆ ಶುದ್ದ ಅರಿಶಿಣ ಪುಡಿ ಪೂರೈಕೆ ಮಾಡುವದರೊಂದಿಗೆ ಹೆಚ್ಚಿನ ಲಾಭವೂ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಅರಿಶಿಣ ಪುಡಿ ಮಾಡುವ ಕೆಲಸಕ್ಕೆ, ಗೋಮೂತ್ರದಿಂದ ಗೋ ಅರ್ಕ ಎನ್ನುವ ಔಷಧ ಸಿದ್ದಗೊಳಿಸುವುದಕ್ಕೆ ಹೆಚ್ಚಿನ ಮಷಿನರಿ ಅಗತ್ಯವಿಲ್ಲ. ಕೆಲವೇ ಖರ್ಚಿನಲ್ಲಿ ಅವುಗಳನ್ನು ಸಿದ್ದಗೊಳಿಸುವ ಮಷಿನ್ ಖರೀದಿಸಬಹುದು ಎನ್ನುತ್ತಾರೆ ರೈತ ಶರಣಪ್ಪ ಮಜ್ಜಗಿ.

ಈ ಕೃಷಿಗೆ ಅಗತ್ಯವಿರುವ ನೀರು ಭೀಮಾ ನದಿಯಿಂದ ಪೈಪ್ ಲೈನ್ ಮಾಡಲಾಗಿದೆ. ವಿದ್ಯುತ್ ಕೂಡಾ ಸರಿಯಾಗಿ ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿಯೋ ಕೂಡಾ ನದಿಯಲ್ಲಿ ನೀರಿನ ಸಂಗ್ರಹವಿರುತ್ತದೆ. ನೀರಿಗೆ ಯಾವುದೇ ತೊಂದರೆಯಿಲ್ಲ. ನೀರಿನ ವ್ಯವಸ್ಥೆಯಿರುವ ರೈತರು ಜವಾರಿ ಆಕಳುಗಳನ್ನು ಸಾಕಿ ಸಾವಯವ ಕೃಷಿ ಮಾಡಿ ಸಾಕಷ್ಟು ಉತ್ಪನ್ನ ತೆಗೆಯಲು ಸಾಧ್ಯವಿದೆ. ರೈತರು ಮನಸ್ಸು ಮಾಡಬೇಕಷ್ಟೇ ಎನ್ನುವದು ರೈತ ಶರಣಪ್ಪ ಮಜ್ಜಗಿ ಅವರ ಸಲಹೆ.

ತೊಗರಿ ಬೆಳೆಯಲ್ಲಿ ನವಣಿ ಸೋಯಾಬೀನ್ ಅಂತರ್ ಬೇಸಾಯ ಮಾಡಿರುವುದು 

ಗೋಮೂತ್ರದಿಂದ ಔಷಧ

‘ಗೋಮೂತ್ರದಿಂದ ಔಷಧ ಸಿದ್ದಗೊಳಿಸುವ ವಿಧಾನವನ್ನು ಕನೇರಿ ಮಠದ ಶ್ರೀಗಳು ತಿಳಿಸಿದ್ದಾರೆ. ಅವರ ಸಲಹೆಯ ಮೇರೆಗೆ ಬೆಳಿಗ್ಗೆ 3 ಗಂಟೆಯಿಂದ 5 ಗಂಟೆಯ ಒಳಗೆ ಗೋಮೂತ್ರಗಳನ್ನು ಸಂಗ್ರಹಿಸಿ ಅದರಿಂದ ಔಷಧ ಸಿದ್ದಗೊಳಿಸಲಾಗುತ್ತದೆ. ಅದನ್ನು 200 ಎಂಎಲ್ ಬಾಟಲ್ ದಲ್ಲಿ ಸಂಗ್ರಹಿಸಿ ಒಂದು ಬಾಟಲ್ ಗೆ ₹80 ಗಳಂತೆ ಮಾರಾಟ ಮಾಡುತ್ತೇವೆ. ಈ ಔಷಧ ಅಸ್ತಮಾ ಪಿತ್ತ ಕೆಮ್ಮು ರಕ್ತದೊತ್ತಡ ಸಕ್ಕರೆ ಕಾಯಿಲೆ ಮಂಡಿನೋವಿ ಚರ್ಮರೋಗ ಮಲಬದ್ದತೆ ಮುಂತಾದ ರೋಗಗಳ ನಿವಾರಣೆಗೆ ರಾಮಬಾಣ ಎಂದು ಪರಿಗಣಿಸಲಾಗಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್ ತೆಗೆದುಕೊಂಡರೇ ಸಾಕು ಈ ಎಲ್ಲಾ ರೋಗಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ರೈತ ಶರಣಪ್ಪ ಮಜ್ಜಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.