ADVERTISEMENT

ಶಾಲೆ, ಕಚೇರಿಗಳಿಗೆ ಚಿತ್ತಾಕರ್ಷಕ ಪೇಂಟಿಂಗ್‌

ಕಲಬುರ್ಗಿ ಆರ್ಟ್ ಸೂಸೈಟಿ ಕಲಾವಿದರ ಕೈಚಳಕ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 12:50 IST
Last Updated 29 ಫೆಬ್ರುವರಿ 2020, 12:50 IST
ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ರೈಲಿನ ಮಾದರಿ ಪೇಂಟಿಂಗ್ ಮಾಡಿರುವುದನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಶುಕ್ರವಾರ ಪರಿಶೀಲಿಸಿದರು
ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ರೈಲಿನ ಮಾದರಿ ಪೇಂಟಿಂಗ್ ಮಾಡಿರುವುದನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಶುಕ್ರವಾರ ಪರಿಶೀಲಿಸಿದರು   

ಚಿತ್ತಾಪುರ: ತಾಲ್ಲೂಕಿನ ದಿಗ್ಗಾಂವ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯಿತಿ ಕಟ್ಟಡ, ಪಶು ಆಸ್ಪತ್ರೆ ಕಟ್ಟಡಗಳು,ಪುರಾತನ ಕೋಟೆಯ ದ್ವಾರ ಬಾಗಿಲುಗಳು ವೈವಿಧ್ಯಮಯ ಪೇಂಟಿಂಗ್‌, ಭಿತ್ತಿಚಿತ್ರಗಳಿಂದ ಆಕರ್ಷಕವಾಗಿ ಕಂಗೊಳಿಸುತ್ತಿವೆ.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ ಅವರ ಆಸಕ್ತಿಯಿಂದ ಕೈಗೊಂಡಿರುವ ಈ ಕೆಲಸ ಈಗ ಗಮನ ಸೆಲೆಯುತ್ತಿದೆ. ಶಾಲಾ ಮಕ್ಕಳಲ್ಲಿ ಪರಿಸರ, ಶಿಕ್ಷಣ, ಸಾಮಾಜಿಕ ಜವಾಬ್ದಾರಿ, ಸ್ವಚ್ಛತೆ, ಸಾರಿಗೆ, ಕಲಿಕೆಯ ಕುರಿತು ವಿವಿಧ ಬಗೆಯ ಭಿತ್ತಿಚಿತ್ರಗಳು ಜನರ ಗಮನ ಸೆಳೆಯುತ್ತಿವೆ.

ಕಲಬುರ್ಗಿ ಆರ್ಟ್ ಸೂಸೈಟಿ ಸಹಯೋಗದಲ್ಲಿ ನಡೆಯುತ್ತಿರುವ ಭಿತ್ತಿಚಿತ್ರ ಶಿಬಿರದಲ್ಲಿ, ರಾಜ್ಯದ ವಿವಿಧ ಭಾಗಗಳಿಂದ ಅನೇಕ ಚಿತ್ರಕಲಾವಿದರು ಶಾಲೆಯ ಗೋಡೆಯ ಮೇಲೆ ಹೃದಯ, ಶ್ವಾಸಕೋಶ, ಮಿದುಳು, ರೈಲ್ವೆ, ಬಸ್, ರೈತರು, ಪ್ರಯಾಣಿಕರು, ವೃದ್ಧರ ಜೀವನ ಸಾರುವ ಹಾಗೂ ಸೌರಮಂಡಲ, ಅಕ್ಷರ ಮಾಲೆ, ಪರಿಸರ, ಹೂವು, ಜಾನುವಾರು, ಕಾಡುಪ್ರಾಣಿಗಳು, ಹಸಿರು ಪರಿಸರ ಕುರಿತು ಕಣ್ಮನ ಸೆಳೆಯುವ ಸುಂದರ ಚಿತ್ರಗಳು ಅನಾವರಣಗೊಂಡಿವೆ.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ ಅವರು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಭಿತ್ತಿಚಿತ್ರಗಳ ಕುರಿತು ಪರಿಶೀಲಿಸಿದರು.
ಕಲಬುರ್ಗಿ ಆರ್ಟ್ ಸೂಸೈಟಿ ಅಧ್ಯಕ್ಷ ಗಿರೀಶ ಕುಲಕರ್ಣಿ, ಉಪಾಧ್ಯಕ್ಷ ಸಂಗಮೇಶ ಎಸ್‌. ಚಿಲ್ಲಶೆಟ್ಟಿ ಅವರೊಂದಿಗೆ ಚರ್ಚಿಸಿ ಬಾಕಿ ಉಳಿದಿರುವ ಕಟ್ಟಡಗಳ ಭಾಗದಲ್ಲಿ ಆಕರ್ಷಕ ಚಿತ್ರ ಬಿಡಿಸುವಂತೆ ಸೂಚಿಸಿದರು. ಶಾಲೆಯ ಗೋಡೆಗಳ ಮೇಲೆ ಬಿಡಿಸಿದ ಚಿತ್ರಗಳು ಮಕ್ಕಳ ಗಮನ ಸೆಳೆಯುತ್ತಿವೆ.

ಮುಖಂಡರಾದ ಹಣಮಂತರೆಡ್ಡಿ, ರವೀಂದ್ರ ರೆಡ್ಡಿ, ಹಣಮಂತ ಸಂಕನೂರು, ದೇವಿಂದ್ರ ಅರಣಕಲ್, ಸಿದ್ರಾಮ ಭೀಮನಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.