ವಿಜಯಪುರ:ಸಿಮಿ ಸಂಘಟನೆ ನಿಷೇಧಿಸಿದ ಬಳಿಕ ಪಿಎಫ್ಐ ಹೆಸರಲ್ಲಿ ರೂಪ ತಾಳಿತ್ತು. ಇದೀಗಈ ಸಂಘಟನೆಯನ್ನು ಐದು ವರ್ಷ ನಿರ್ಮೂಲನೆ ಮಾಡಿರುವುದರಿಂದ ಬೇರೆ ಹೆಸರಿನಲ್ಲಿ ಪಿಎಫ್ಐ ಗುರುತಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಎಲ್ಲ ದಿಕ್ಕಿನಿಂದಲೂ ತನಿಖೆ ಮಾಡಿಬುಡ ಸಮೇತ ಮಟ್ಟಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಆಗ್ರಹ, ಬೇಡಿಕೆ ಮೊದಲಿನಿಂದಲೂ ಇತ್ತು. ಇದೀಗ ಕೇಂದ್ರ ಸರ್ಕಾರ ನಿಷೇಧಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಪಿಎಫ್ಐಗೆ ವಿದೇಶದಿಂದ ಹಣ ಬರುತ್ತಿರುವುದು, ಪಾಕಿಸ್ತಾನದೊಂದಿಗೆ ಸಂಬಂಧ ಇರುವುದು,ದೇಶದಲ್ಲಿ ಭಯೋತ್ಪಾದನೆ, ದೇಶ ವಿರೋಧಿ ಹೋರಾಟ ನಡೆಸುತ್ತಿರುವ ಬಗ್ಗೆ, ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಹುನ್ನಾರದ ಬಗ್ಗೆ ಪಿಎಫ್ಐ ಕಚೇರಿ, ಮುಖಂಡರ ಮನೆ ಮೇಲೆ ದಾಳಿ ಮಾಡಿದಾಗ ಸಾಕಷ್ಟು ಸಾಕ್ಷಿ ಪುರಾವೆಗಳು ಎನ್ಐಎಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪಿಎಫ್ಐ ನಿಷೇಧಿಸಿರುವುದು ದೇಶಭಕ್ತರಿಗೆ ಖುಷಿ ನೀಡಿದೆ.ದೇಶದ ಜನ ನೆಮ್ಮದಿಯಿಂದ ಬದುಕಲು ಇದರಿಂದ ಸಹಾಯವಾಗಿದೆ ಎಂದರು.
ಆರ್ಎಸ್ಎಸ್ ದೇಶ ಭಕ್ತ ಸಂಘಟನೆ:ಪಿಎಫ್ಐ ಜೊತೆಗೆ ಆರ್ಎಸ್ಎಸ್ ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,ಆರ್ಎಸ್ಎಸ್ ಒಂದು ದೇಶ ಭಕ್ತರ ಸಂಘಟನೆ. ಯಾವುದೇ ಹಿಂಸಾಕೃತ್ಯದಲ್ಲಿ ತೊಡಗಿಲ್ಲ. ಮದ್ದುಗುಂಡು ಬಳಸಿ ದೇಶ ವಿರೋಧಿ ಚಟುವಟಿಕೆ ನಡೆಸಿಲ್ಲ. ಯಾವುದೇ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ ಎಂದರು.
ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲದಿಂದಲೂ ಆರ್ಎಸ್ಎಸ್ ನಿಷೇಧದ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆರ್ಎಸ್ಎಸ್ ಮೇಲಿನ ನಿಷೇಧವನ್ನುಸುಪ್ರೀಂ ಕೋರ್ಟ್ ತೆರವುಗೊಳಿಸಿದೆ ಎಂದು ಸಮರ್ಥಿಸಿಕೊಂಡರು.
*****
₹500 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಭೂಮಿಪೂಜೆ, ಉದ್ಘಾಟನೆ, ಜೆಎಸ್ಎಸ್ ಆಸ್ಪತ್ರೆ ಉದ್ಘಾಟನೆಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ವಿಜಯಪುರಕ್ಕೆ ಸೆ.30ರಂದು ಬರಲಿದ್ದಾರೆ
–ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.