ವಿಜಯಪುರ: ‘ಜಿಲ್ಲೆಯಲ್ಲಿ ಡೆಂಗಿ ರೋಗ ನಿಯಂತ್ರಣಕ್ಕೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಪಾಲಿಕೆ ಅಧೀನದಲ್ಲಿರುವ 14 ಫಾಗಿಂಗ್ ಯಂತ್ರಗಳನ್ನು ದುರಸ್ತಿಗೊಳಿಸಿ, ಫಾಗಿಂಗ್ ಕಾರ್ಯ ಚುರುಕುಗೊಳಿಸಬೇಕು. ವಿವಿಧ ತಾಲ್ಲೂಕು ಮತ್ತು ಗ್ರಾಮಗಳಲ್ಲೂ ಫಾಗಿಂಗ್ ಮಾಡಿಸಬೇಕು. ನೀರು ಸಂಗ್ರಹಣಾ ತೊಟ್ಟಿಗಳಲ್ಲಿ ಲಾರ್ವಾ ಮೀನು ಬಿಡುವ ಜೊತೆಗೆ, ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.
‘ಜಿಲ್ಲೆಯಾದ್ಯಂತ ಉದರ ದರ್ಶಕ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ನಿಗದಿತ ದಿನಾಂಕಗಳಂದು ಹಮ್ಮಿಕೊಳ್ಳಬೇಕು ಮತ್ತು ನೂರರಷ್ಟು ಪ್ರಗತಿ ಸಾಧಿಸಬೇಕು’ ಎಂದರು.
ಮೂಲಸೌಕರ್ಯ ಕೊರತೆ ಇರುವ ಜಿಲ್ಲೆಯ 5 ತಾಲ್ಲೂಕು ಆರೋಗ್ಯ ಕೇಂದ್ರಗಳ ಪರಿಶೀಲನೆಯನ್ನೂ ಜಿಲ್ಲಾಧಿಕಾರಿ ನಡೆಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಡಾ.ಮಹೇಶ ನಾಗರಬೆಟ್ಟ, ಮಲೇರಿಯಾ ಅಧಿಕಾರಿ ಡಾ.ಜೈಬುನ್ನೀಸಾ ಬೀಳಗಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸಂಪತ್ ಗುಣಾರಿ, ತಂಬಾಕು ನಿಯಂತ್ರಣಾಧಿಕಾರಿ ಡಾ.ಎಂ.ಬಿ.ಬಿರಾದಾರ, ಡಾ.ಮುಕುಂದ ಗಲಗಲಿ, ಎಚ್ಐವಿ ನಿಯಂತ್ರಣಾಧಿಕಾರಿ ಡಾ.ಐ.ಎಸ್.ಧಾರವಾಡಕರ, ಡಾ.ಚನ್ನಮ್ಮ ಕಟ್ಟಿ, ಡಾ.ಪ್ರಕಾಶ ಗೋಟಖಂಡ್ಕಿ, ಡಾ.ಸಂತೋಷ ನಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.