ADVERTISEMENT

ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಸಿದ್ಧತೆ: ಕೋಡಿಹಳ್ಳಿ ಚಂದ್ರಶೇಖರ

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 14:12 IST
Last Updated 19 ಮಾರ್ಚ್ 2025, 14:12 IST
ಕೋಡಿಹಳ್ಳಿ ಚಂದ್ರಶೇಖರ 
ಕೋಡಿಹಳ್ಳಿ ಚಂದ್ರಶೇಖರ    

ವಿಜಯಪುರ: 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಸಿದ್ಧತೆ ನಡೆಸಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ, ಪ್ರಗತಿಪರ, ರೈತ, ವಿದ್ಯಾರ್ಥಿ, ಯುವ ಸಂಘಟನೆಗಳ ಒಡಗೂಡಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜ್ಯದ ನೆಲ, ಜಲ, ಭಾಷೆ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶವಿದೆ ಎಂದರು.

ಪ್ರಾದೇಶಿಕ ಪಕ್ಷ ಸ್ಥಾಪನೆ ಸಂಬಂಧ ಜಾಗೃತಿ ಮಾಡಿಸಲು ಆಂದೋಲನ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನ ಜಾಗೃತಿ ನಡೆದ ಬಳಿಕ ಪಕ್ಷ ಸ್ಥಾಪನೆ ಅಂತಿಮ ರೂಪ ಪಡೆಯಲಿದೆ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಂದ ಜನಸಾಮಾನ್ಯರು, ರೈತರು, ಕೂಲಿಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮೂರು ಪಕ್ಷಗಳು ರಾಜ್ಯದ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ದೇವೇಗೌಡರು ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿಯರಿಗೆ ಅಧಿಕಾರ ಕೊಡಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಇವರ ಜಾತ್ಯತೀತ ನಿಲುವು ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ರೈತರಿಗೆ ಬಿಡಿಗಾಸಿನ ಲಾಭ, ಅನುಕೂಲವಾಗಿಲ್ಲ. ಕೇವಲ ಔಷಧ, ರಸಗೊಬ್ಬರ, ಯಂತ್ರೋಪಕರಣಗಳಿಗೆ ಧನಸಹಾಯ ಮಾಡುವ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಕಂಪನಿಗಳ ಪರವಾದ ಯೋಜನೆ ತಂದಿದ್ದಾರೆ. ರೈತರ ಸುಧಾರಣೆಗೆ ಬಜೆಟ್‌ಗಳಲ್ಲಿ ಆದ್ಯತೆ ಸಿಕ್ಕಿಲ್ಲ. ಉತ್ಪಾದಕನನ್ನು ಕಡೆಗಣಿಸಲಾಗಿದೆ, ಬಜೆಟ್‌ಗಳಿಗೂ ರೈತರಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಕೇಂದ್ರ ಬಿಜೆಪಿ ಸರ್ಕಾರವು ಅದಾನಿ, ಅಂಬಾನಿಗೆ ಸಹಾಯ ಮಾಡಲು ಇರುವ ಸರ್ಕಾರವಾಗಿದೆ. ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಬ್ಯಾಂಕ್‌ ಸಾಲವನ್ನು ರೈಟ್‌ ಅಪ್‌ ಮಾಡಿದೆ. ಈ ದುಡ್ಡು ಮೋದಿ, ಅಮಿತ್‌ ಶಾ ಅವರ ಮನೆಯ ಹಣವೇ. ಇದ್ಯಾವ ಸೀಮೆ ಸರ್ಕಾರ, ಕೇವಲ ಭಾರತ ಮಾತಾಕಿ ಜೈ ಎನ್ನುವ ಸರ್ಕಾರವಾಗಿದೆ. ಉದ್ಯಮಿದಾರರ ಹಿತರಕ್ಷಣೆಯ ಸರ್ಕಾರವಾಗಿದೆ ಎಂದು ಆಪಾದಿಸಿದರು.

ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಬರದಿಂದ ರೈತ ಬೆಳೆಹಾನಿಯಾದರೆ ಸೂಕ್ತ ಪರಿಹಾರ ನೀಡಲಿಲ್ಲ, ರಾಜ್ಯ ಸರ್ಕಾರವೂ ನೀಡಲಿಲ್ಲ. ಸುಪ್ರೀಂ ಕೋರ್ಟ್ ಆದೇಶ ಮಾಡಿದಾಗ ಪರಿಹಾರ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಕಾಂಗ್ರೆಸ್‌ ಜೆಡಿಎಸ್‌ ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕರಿಸಬೇಕು.  ರಾಜ್ಯದ ಸಮಸ್ಯೆಗಳಿಗೆ ಈ ಪಕ್ಷಗಳಿಂದ ಪರಿಹಾರ ಸಿಗುವುದಿಲ್ಲ. ನಾಡನ್ನು ರಕ್ಷಣೆ ಮಾಡುವ ಪಕ್ಷವನ್ನು ಕಟ್ಟಲು ಬೆಂಬಲಿಸಬೇಕು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.