ADVERTISEMENT

ಅಂಗವಿಕಲರಿಗೆ ವಿಶಿಷ್ಠ ಗುರುತಿನ ಚೀಟಿ ವಿತರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಮೇ 2022, 12:58 IST
Last Updated 27 ಮೇ 2022, 12:58 IST
ರಾಹುಲ್ ಶಿಂಧೆ
ರಾಹುಲ್ ಶಿಂಧೆ   

ವಿಜಯಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಅಂಗವಿಕಲರಿಗೆವಿಶಿಷ್ಠ ಗುರುತಿನ ಚೀಟಿ ವಿತರಿಸುವ ವಿಶೇಷ ಶಿಬಿರ ಏರ್ಪಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿಯೊಬ್ಬ ಅಂಗವಿಕಲರು ಸಹ ಅಂಗವಿಕಲ ವಿಶಿಷ್ಠ ಗುರುತಿನ ಚೀಟಿ ಹೊಂದಬೇಕು ಎನ್ನುವ ಉದ್ದೇಶದೊಂದಿಗೆ ಜಿಲ್ಲೆಯ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಎರಡು ದಿನಗಳ ವಿಶೇಷ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.‌

ಶಿಬಿರದಲ್ಲಿ ತಜ್ಞ ವೈದ್ಯರಿರುತ್ತಾರೆ. ಫಲಾನುಭವಿಗಳು ಗ್ರಾಮಗಳಿಂದ ಆಸ್ಪತ್ರೆಗೆ ಬಂದು ಹೋಗಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯತಿಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದುವರೆಗೆ ಅರ್ಜಿಯನ್ನು ಸಲ್ಲಿಸದೇ ಇರುವ ಅಂಗವಿಕಲರು ಅರ್ಜಿಗಳನ್ನು ಶಿಬಿರದಲ್ಲಿ ಪಡೆದು ತಪಾಸಣೆಗೊಳಪಡಿಸಿ ಗುರುತಿನ ಚೀಟಿ ನೀಡಲಾಗುತ್ತದೆ. ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಓ ರಾಹುಲ್ ಶಿಂಧೆ ಅರ್ಹ ಫಲಾನುಭವಿಗಳಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಸಿಂದಗಿ ತಾಲ್ಲೂಕಿನಲ್ಲಿ ಶುಕ್ರವಾರ ವಿಶೇಷ ತಪಾಸಣಾ ಶಿಬಿರ ನಡೆಯಿತು. ಈ ವೇಳೆ 438 ಜನ ಅಂಗವಿಕಲರು ತಪಾಸಣೆಗೊಳಪಟ್ಟು ವಿಶೇಷ ಸೌಲಭ್ಯ ಪಡೆದರು. ಶ್ರವಣದೋಷವುಳ್ಳ ಅಂಗವಿಕಲರನ್ನು ಹೊರತುಪಡಿಸಿ ಇನ್ನುಳಿದ ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ಅಂಗವಿಕಲರು ವಿಶೇಷ ತಪಾಸಣೆಗೊಳಪಟ್ಟು ವಿಶಿಷ್ಠ ಗುರುತಿನ ಚೀಟಿ ಪಡೆದರು.

ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಆಶು ನದಾಫ್, ಸಿಂದಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಸಿಂದಗಿ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಮಕೃಷ್ಣ ಇಂಗಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.