ವಿಜಯಪುರ: ಇಎಫ್ಎಂಎಸ್ನಿಂದ ಹೊರಗುಳಿದ ಸಿಬ್ಬಂದಿ ಮಾಹಿತಿ ಅಳವಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಗುರುವಾರ ಮನವಿಪತ್ರ ಸಲ್ಲಿಸಲಾಯಿತು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಇಎಫ್ಎಂಎಸ್ ಮೂಲಕ ವೇತನ ಪಾವತಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ, ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಕೆಲವು ದಾಖಲೆಗಳು ಲಭ್ಯವಿಲ್ಲ ಎಂಬ ನೆಪವೊಡ್ಡಿ ಮಾಹಿತಿಯನ್ನು ಅಳವಡಿಸಿಲ್ಲ. ಆದ್ದರಿಂದ ಕೂಡಲೆ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವೇತನ ಪಾವತಿಸದೇ ಸತಾಯಿಸಲಾಗುತ್ತಿದೆ. 14ನೇ ಹಣಕಾಸಿನಲ್ಲಿ ಶೇ 10ರಷ್ಟು ಆಡಳಿತ ವೆಚ್ಚದಲ್ಲಿ ಸಿಬ್ಬಂದಿವೇತನ ಪಾವತಿಸ ಮಾಡಲು ಆದೇಶವಿದ್ದರೂ, ಪಾವತಿ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ‘ಶೀಘ್ರದಲ್ಲಿ ಇಎಫ್ಎಂಎಸ್ನಲ್ಲಿ ಮಾಹಿತಿ ಅಳವಡಿಸಬೇಕು. ಸಿಬ್ಬಂದಿ ಅನುಮೋದನೆ ನೀಡಲು ಎರಡು ವರ್ಷದ ಹಿಂದೆ ಕಡತ ಪರಿಶೀಲನೆ ಮಾಡಿದ್ದು, ಅದು ಜಾರಿಯಾಗಿಲ್ಲ. ಆದ್ದರಿಂದ, ಅದನ್ನು ಜಾರಿಗೊಳಿಸಿ ಎಲ್ಲರಿಗೂ ಅನುಮೋದನೆ ನೀಡಬೇಕು’ ಎಂದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ‘ಸರ್ಕಾರದ ಆದೇಶದಂತೆ ಹೊಸ ವೇತನ ಜಾರಿಯಾದರೂ ಇನ್ನೂ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಕಡಿಮೆ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಸಮಿತಿ ಸದಸ್ಯ ವಿಠ್ಠಲ ಹೊನಮೋರೆ, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜು ಜಾಧವ ಮಾತನಾಡಿದರು.
ಜನವಾದಿ ಮಹಿಳಾ ಸಂಘದ ಮುಖಂಡರಾದ ಸುರೇಖಾ ರಜಪೂತ, ಅಬ್ದುಲ್ ರಜಾಕ್ ತಮದಡ್ಡಿ, ಕುಮಾರ ರಾಠೋಡ, ಶೇಖು ಲಮಾಣಿ, ಶಿವಾನಂದ ನಾಲ್ಕಮಕ್ಕಳ, ಯಲ್ಲನಗೌಡ ಬಿರಾದಾರ, ಮಲ್ಲಿಕಾರ್ಜುನ ಮಾದರ, ತುಕಾರಾಮ ಮಾರನೂರ, ಎಂ.ಕೆ.ಚಳ್ಳಗಿ, ಎಂ.ಎಸ್.ಕೊಂಡಗೂಳಿ, ನಾಗಪ್ಪ ತೆಲಸಂಗ, ಬಾಳು ದಶವಂತ, ಲಲಿತಾ ಎಂಟಮಾನ, ಸೋಮಯ್ಯ ಸಂಬಳ, ಹಳ್ಳಪ್ಪ ಸಾಲೋಟಗಿ, ರಾಮಚಂದ್ರ ಕುಂಬಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.