ವಿಜಯಪುರ: ವಿಜಯಪುರ ನೂತನ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಕೆಲಸಕ್ಕೆ ಬಾರದ ಯಾರರೋ ಅನಗತ್ಯವಾಗಿ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷ ಕಾಲಿನ ಚಪ್ಪಲಿ ಹರಿದುಕೊಂಡು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಅಲೆದು, ಬಹಳ ಪ್ರಯಾಸಪಟ್ಟು ವಿಜಯಪುರಕ್ಕೆ ವಿಮಾನ ನಿಲ್ದಾಣ ತಂದಿದ್ದೇನೆ ಎಂದರು.
ವಿಮಾನ ನಿಲ್ದಾಣ ಸ್ಥಾಪನೆಗಾಗಿ ಮುಖ್ಯಮಂತ್ರಿ ಜೊತೆ ಚರ್ಚಿಸಿದ ಬಳಿಕ ಅವರು ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಮಾಡುವಂತೆ ಕಾರಜೊಳ ಅವರಿಗೆ ಸೂಚಿಸಿದರು. ಇದೀಗ ಕಾಮಗಾರಿ ಆರಂಭವಾಗಿದೆ. ಇದರಲ್ಲಿ ನನ್ನದೇನು ಸ್ವಾರ್ಥ ಇಲ್ಲ, ಅಲ್ಲಿ ನನ್ನದೇನು ಹೊಲ ಇಲ್ಲ ಎಂದು ಹೇಳಿದರು.
42 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದೂ ಹೇಸಿಗೆ ಕೆಲಸ ಮಾಡಿಲ್ಲ, ಈ ಜನುಮದಲ್ಲಿ ಮಾಡಲ್ಲ ಎಂದರು.
ಮುಖ್ಯಮಂತ್ರಿಗೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂಬ ಕಾರಣಕ್ಕೆ ಮೈಮೇಲೆ ತೆಗೆದುಕೊಂಡು ವಿಮಾನ ನಿಲ್ದಾಣದ ಕೆಲಸ ಮಾಡಿದ್ದೇನೆ. ಆದರೂ ಕೆಲವರು ನನಗೆ ಬೈಯುತ್ತಾರೆ. ಯಾರು ನನ್ನನ್ನ ತೆಗಳುತ್ತಾರೋ ಅವರೇ ನನ್ನ ಗುರುಗಳು ಎಂದು ತಿಳಿದುಕೊಂಡಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.