ವಿಜಯಪುರ: ‘ಪ್ರವಾದಿ ಮಹಮ್ಮದ್ ಅವರ ಸ್ಮೃತಿ ಗೀತೆಗಳು ಸಾರ್ವಕಾಲಿಕವಾಗಿವೆ’ ಎಂದು ಮನಗೂಳಿಯ ಸಜ್ಜಾದೆ ನಶೀನ್ ಖಾನಕಾ–ಎ–ಪೀರ್–ಎ– ತರಿಕತ್ ಸೈಯ್ಯದ್ ಶಾಹ ಹುಸೇನ್ ಪೀರ್ ಹೇಳಿದರು.
ನಗರದ ಅಫಜಲಪುರ ಟಕ್ಕೆಯಲ್ಲಿರುವ ಉರ್ದು ವಸತಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರವಾದಿ ಮಹಮ್ಮದರ ಸ್ಮೃತಿ ಗೀತೆ (ನಾಥ ಶರೀಫ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೂಫಿಗಳು, ಸಂತರು ಮತ್ತು ಶರಣರು ಕೂಡಿ ಬದುಕಿದ ವಿಜಯಪುರ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಪ್ರವಾದಿ ಮಹಮ್ಮದರು ಮಾನವ ಕುಲವನ್ನು ಪ್ರೀತಿಸಿದವರು. ಜಗತ್ತಿಗೆ ಸಂದೇಶ ನೀಡಿದವರು. ಅವರ ಕುರಿತು ಸ್ಮೃತಿ ಗೀತೆ ಹಾಡುವ ಮೂಲಕ ಅವರ ಆದರ್ಶಗಳು ಮತ್ತು ದೇಶಕ್ಕೆ ನೀಡಿದ ಸನ್ಮಾರ್ಗದ ಮಹತ್ವವನ್ನು ಪುನರಾವಲೋಕನ ಮಾಡಿಕೊಡುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಪ್ರೀತಿ, ಮಮತೆ ಮತ್ತು ವಾತ್ಸಲ್ಯ ಬೆಳೆಯುತ್ತದೆ’ ಎಂದು ತಿಳಿಸಿದರು.
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ‘ಪ್ರವಾದಿ ಮಹಮ್ಮದರು ವಿಶ್ವವನ್ನು ಪ್ರೀತಿಸಿದರು. ಅವರ ತಾಳ್ಮೆ, ಸಹನೆ ಮತ್ತು ಪರೋಪಕಾರ ಗುಣ ವಿಶ್ವಕ್ಕೆ ಮಾದರಿ. ಪ್ರವಾದಿ ಮಹಮ್ಮದರ ಸ್ಮೃತಿ ಗೀತೆಗಳು ಮಹತ್ವದ್ದಾಗಿವೆ’ ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ದಿಲಾವರ ಖಾಜಿ ಮಾತನಾಡಿ, ‘ಪವಿತ್ರ ಕುರ್ಆನ್ ಮಾನವೀಯ ಕುಲಕೋಟಿಯ ಒಳಿತಿಗಾಗಿ ಬರೆದ ಗ್ರಂಥವಾಗಿದೆ. ಅದನ್ನು ಅರ್ಥ ಮಾಡಿಕೊಂಡು ಬದುಕಬೇಕು’ ಎಂದು ಹೇಳಿದರು.
ಯೂಸೂಫ್ ಪಟೇಲ್, ಅಬ್ದುಲ್ ರಜಾಕ್ ಸೈಯ್ಯದ್, ಮೆಹಬೂಬ್ ಅಲಿ ಸಲತಿ, ಅಬ್ರಾರಖಾನ್, ಮೈನುದ್ದಿನ್ ಶೇಖ, ಮುಜಮ್ ಇನಾಮದಾರ, ಮಕರಂದ ಇನಾಮದಾರ, ನವೀದಖಾನ್, ಜಾವೀದ ಇನಾಮದಾರ, ಸೈಯ್ಯದ್ ಅಬ್ದುಲರಹೇಮಾನ್ ಖಾಜಿ, ಶಫೀಕ ಮಹಾಬರಿ, ಇಸಾಕ್ ದಖನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.