ADVERTISEMENT

ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಿ; ನಿಖಿಲ್ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:45 IST
Last Updated 26 ಸೆಪ್ಟೆಂಬರ್ 2024, 15:45 IST
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ   

ವಿಜಯಪುರ: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಸಿದ್ದರಾಮಯ್ಯನವರು ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನಿಖೆಗೆ ಸಹಕರಿಸಬೇಕು’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪ ಕೇಳಿ ಬಂದಾಗ ತನಿಖೆಗೆ ಹೋಗಬೇಕು, ರಾಜೀನಾಮೆ ಕೊಡಬೇಕೆಂದು ಸಿದ್ಧರಾಮಯ್ಯ ಆಗ್ರಹಿಸಿದ್ದರು. ಇದೀಗ ಅವರ ಮೇಲೆಯೇ ಆರೋಪ ಕೇಳಿಬಂದಿದೆ. ತಾವೂ ಸಹ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಅವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯವೇ’ ಎಂದು ಪ್ರಶ್ನಿಸಿದರು.

‘ಮುಡಾ ಹಗರಣದಲ್ಲಿ ಸ್ವತಃ ಈ ರಾಜ್ಯದ ಸಿಎಂ ಭಾಗಿ ಆಗಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕುಮಾರಸ್ವಾಮಿ ಮೊದಲು ರಾಜಿನಾಮೆ ಕೊಡಲಿ’ ಎಂಬ ಸಚಿವ ಎಂ.ಬಿ. ಪಾಟೀಲರ ಹೇಳಿಕೆಗೆ  ಪ್ರತಿಕ್ರಿಯಿಸಿದ ಅವರು, ‘ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ವಿಪಕ್ಷದವರನ್ನು ಪ್ರಶ್ನೆ ಕೇಳುವ ಸ್ಥಿತಿ ಬಂದಿದೆ. ರಾಜ್ಯದ ಜನತೆ ಕೇಳುತ್ತಿರುವ ಪ್ರಶ್ನೆಗೆ ಅವರು ಉತ್ತರಿಸಲಿ ಅಷ್ಟೆ. ನಮ್ಮ ಮೇಲೆ ಸುಳ್ಳು ದಾಖಲೆ ಹುಡುಕುವುದರಲ್ಲಿ ಕಾಂಗ್ರೆಸ್ ಸಮಯ ಕಳೆಯುತ್ತಿದೆ’ ಎಂದು ಟೀಕಿಸಿದರು.

‘ಪಾದಯಾತ್ರೆ ಯಶಸ್ಸು ಇವರಿಗೆ ಸಹಿಸಲಾಗುತ್ತಿಲ್ಲ. ನಾವು ಪಾದಯಾತ್ರೆ ಮಾಡಿದ್ದು ಯಾವುದೋ ಒಂದು ವ್ಯಕ್ತಿಯ ಮೇಲಿನ ದ್ವೇಷದಿಂದ ಅಲ್ಲ. ರಾಜ್ಯದ ಸಂಪತ್ತು ಲೂಟಿ ಆದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಲಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.