ಇಂಡಿ: ತಾಲ್ಲೂಕಿನ ಭುಯ್ಯಾರ ಗ್ರಾಮದಿಂದ ಸಾತಲಗಾಂವ, ಲಾಳಸಂಗಿ ಮತ್ತು ನಾಗರಹಳ್ಳಿ ಗ್ರಾಮಗಳಿಗೆ ಕೂಡುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗವಾಗಿ ಅಡ್ಡಾಡುವ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಶಾಲಾ ಮಕ್ಕಳು, ಬೈಕ್ ಸವಾರರು ದಿನನಿತ್ಯ ಪರಿತಪಸುವಂತಾಗಿದೆ ಕಾರಣ ಈ ರಸ್ತೆಯನ್ನು ಕೂಡಲೇ ಡಾಂಬರೀಕರಣ ಮಾಡಬೇಕೆಂದು ಬುಧವಾರ ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ನೂರಾರು ರೈತರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಂಖಡರಾದ ಗಂಗಾಧರ ತಳವಾರ ಮತತು ಪ್ರಭುಲಿಂಗ ಗೋಳಸಾರ ಮಾತನಾಡಿ, ನಮ್ಮ ಗ್ರಾಮದ ಅಕ್ಕಪಕ್ಕದ ಗ್ರಾಮಗಳ ಎಲ್ಲಾ ರಸ್ತೆಗಳು ಡಾಂಬರೀಕರಣಗೊಂಡಿವೆ. ನಮ್ಮ ಗ್ರಾಮದ ಈ ರಸ್ತೆ ಮಾತ್ರ ಕೆಸರಿನಿಂದ ಕೂಡಿದೆ. ಇಲ್ಲಿ ಅಡ್ಡಾಡಲು ಕಷ್ಟವಾಗುತ್ತಿದೆ. ಇದನ್ನು ಈ ಕೂಡಲೇ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದರು.
ಒಂದು ವೇಳೆ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಕ್ರಮ ಜರುಗಿಸದಿದ್ದರೆ ಗ್ರಾಮಸ್ಥರೆಲ್ಲರೂ ಕೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಆರ್ಡಿಪಿಐ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದುದಲ್ಲದೇ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಕೆಲವು ದಿವಸಗಳ ಕಾಲ ಕಾಯ್ದು ನೋಡುತ್ತೇವೆ ಎಂದರು.
ರೈತರಾದ ಗಂಗಾಧರ ತಳವಾರ, ಪ್ರಭುಲಿಂಗ ಗೋಳಸಾರ ತಿಳಿಸಿದ್ದಾರೆ. ಮನವಿ ಕೊಡುವ ಸಂದರ್ಭದಲ್ಲಿ ಶ್ಯಾಂತಕುಮಾರ ಬೆಳಮಗಿ, ದಶರಥ ಬಾರಾಮತಿ, ಗಡ್ಡೆಪ್ಪ ಆಳೂರ, ಕೃಷ್ಣಪ್ಪ ಗೋಲಗೇರಿ, ಗುರು ಅಜಗೊಂಡ, ಸಿದ್ದಬೀರ ಸಾಲುಟಗಿ, ಮಾಸಿದ್ದ ಮಖಣಾಪೂರ, ಸಾತಗೌಡ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.