ADVERTISEMENT

ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್‌ನ ಕೊಲೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 17:07 IST
Last Updated 25 ಜೂನ್ 2018, 17:07 IST

ವಿಜಯಪುರ:ವೈಯಕ್ತಿಕ ದ್ವೇಷದಿಂದ ರೌಡಿಶೀಟರ್‌ನನ್ನು ಆತನ ಮನೆ ಬಾಗಿಲಲ್ಲೇ, ಭಾನುವಾರ ತಡರಾತ್ರಿ ಕಳ್ಳನೊಬ್ಬ ಸಹಚರನ ಜತೆ ಸೇರಿಕೊಂಡು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ವಿಜಯಪುರದ ಸಮೀರ್‌ ಪಠಾಣ್ ಕೊಲೆಯಾದ ರೌಡಿಶೀಟರ್‌. ಕೊಲೆ ಆರೋಪಿ ಸಲ್ಮಾನ್‌ಖಾನ್‌ನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಎನ್ನಲಾಗಿದೆ.

‘ಹತ್ತು ದಿನಗಳ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಸಮೀರ್‌ ಪಠಾಣ್‌ ಹೊರ ಬಂದಿದ್ದ. ತನ್ನ ವಿರುದ್ಧ ಮತ್ತೆ ದ್ವೇಷ ತೀರಿಸಿಕೊಳ್ಳಬಹುದು ಎಂಬ ಸಂಶಯದಿಂದ ಸಲ್ಮಾನ್‌ಖಾನ್‌ ಸಹಚರನೊಬ್ಬನ ಜತೆ ಭಾನುವಾರದ ತಡರಾತ್ರಿ 1.30ರ ವೇಳೆಗೆ ಈ ದುಷ್ಕೃತ್ಯ ಎಸಗಿದ್ದಾನೆ’ ಎಂದು ಗಾಂಧಿಚೌಕ್‌ ಪೊಲೀಸರು ತಿಳಿಸಿದರು.

ADVERTISEMENT

‘ಮನೆಯಲ್ಲಿ ಮಲಗಿದ್ದ ಸಲ್ಮಾನ್‌ನನ್ನು ಎಬ್ಬಿಸಿ, ಹೊರ ಕರೆದು ಮಚ್ಚಿನಿಂದ ಸ್ಥಳದಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ. ತಕ್ಷಣವೇ ಆತನ ದೇಹವನ್ನು ಅಲ್ಲಿಂದ ಹೊತ್ತೊಯ್ದು ಅತಾಲಟ್ಟಿ–ಕಣಮುಚನಾಳ ನಡುವಿನ ರಸ್ತೆ ಬದಿಯಲ್ಲಿ ಎಸೆದು ಸಲ್ಮಾನ್‌ ಪರಾರಿಯಾಗಿದ್ದ’ ಎಂದು ಅವರು ಹೇಳಿದರು.

ವಿವರ:‘ಕೊಲೆ ಆರೋಪಿ ಸಲ್ಮಾನ್‌ ಖಾನ್‌ ಈ ಹಿಂದೆ ಹಲ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಈತ ಸಮೀರ್‌ ಪಠಾಣ್‌ ಪತ್ನಿಯ ಜತೆ ಸಲುಗೆ ಬೆಳೆಸಿಕೊಂಡಿದ್ದ. ಸಂಶಯಗೊಂಡ ಸಮೀರ್ ಕುಪಿತಗೊಂಡು 2017ರ ಸೆಪ್ಟೆಂಬರ್‌ನಲ್ಲಿ ಸಲ್ಮಾನ್‌ ಮೇಲೆ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ.

ಕಳ್ಳತನ ಪ್ರಕರಣಗಳಲ್ಲಿ ಸಿಲುಕಿದ್ದ ಸಲ್ಮಾನ್‌ ಸಹ ಜೈಲು ಪಾಲಾಗಿದ್ದ. ಇಬ್ಬರೂ ಜೈಲಿನೊಳಗೆ ಪರಸ್ಪರ ಮುಗಿಸುವುದಾಗಿ ಬೆದರಿಕೆ ಹಾಕಿಕೊಂಡಿದ್ದರು. ಸಲ್ಮಾನ್‌ ಮೊದಲೇ ಜಾಮೀನಿನ ಮೇಲೆ ಹೊರ ಬಂದು ಸಮೀರನ ಕೊಲೆಗೆ ತಂತ್ರ ರೂಪಿಸಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ ಪ್ರಾಣಭಯದಿಂದ ಸಮೀರ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ’ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.