ADVERTISEMENT

ಸಾರವಾಡ ಸಮಗ್ರ ಅಭಿವೃದ್ಧಿ: ಎಂ.ಬಿ.ಪಾಟೀಲ್

₹ 50 ಲಕ್ಷ ಮೊತ್ತದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 15:56 IST
Last Updated 8 ಸೆಪ್ಟೆಂಬರ್ 2020, 15:56 IST
ಬಬಲೇಶ್ವರ ತಾಲ್ಲೂಕಿನ ಸಾರವಾಡ ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ  ನಿರ್ಮಿಸಲಾಗಿರುವ ಯಾತ್ರಿ ನಿವಾಸವನ್ನು ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಎಂ.ಬಿ.ಪಾಟೀಲ ಉದ್ಘಾಟಿಸಿದರು
ಬಬಲೇಶ್ವರ ತಾಲ್ಲೂಕಿನ ಸಾರವಾಡ ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ  ನಿರ್ಮಿಸಲಾಗಿರುವ ಯಾತ್ರಿ ನಿವಾಸವನ್ನು ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಎಂ.ಬಿ.ಪಾಟೀಲ ಉದ್ಘಾಟಿಸಿದರು   

ವಿಜಯಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ರಾಜಕೀಯವಾಗಿ ಎತ್ತಿ ಹಿಡಿದ ಸಾರವಾಡ ಗ್ರಾಮದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿ ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ಸಾರವಾಡದಲ್ಲಿ ಗ್ರಾಮ ದೇವತೆ ಈಶ್ವರ ದೇವಸ್ಥಾನದ ಹತ್ತಿರ ನಿರ್ಮಿತಿ ಕೇಂದ್ರದಿಂದ ₹ 50 ಲಕ್ಷ ಮೊತ್ತದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಲ್ಲಿ ಬಂದು ಭಾಷಣ ಮಾಡಿ, ನನ್ನನ್ನು ಸೋಲಿಸಲು ವಿನಂತಿಸಿದ್ದರು. ಆದರೆ, ಈ ಗ್ರಾಮದ ಜನ ನನಗೆ ಬಹುಮತ ನೀಡಿ, ಆಯ್ಕೆಮಾಡುವ ಮೂಲಕ ಪ್ರಧಾನಮಂತ್ರಿಗಳ ಮಾತನ್ನು ತಿರಸ್ಕರಿಸಿದ್ದೀರಿ. ಹೀಗಾಗಿ ಈ ಗ್ರಾಮದ ಮೇಲೆ ನನಗೆ ವಿಶೇಷ ಪ್ರೀತಿ ಇದೆ ಎಂದರು.

ADVERTISEMENT

ಸುವರ್ಣ ಗ್ರಾಮೋದಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಈ ಗ್ರಾಮದಲ್ಲಿ ಈಗಾಗಲೇ ಮಾಡಲಾಗಿದೆ. ಇನ್ನೂ ಉಳಿದಿರುವ ಸಾರವಾಡ-ಕಾಖಂಡಕಿ ರಸ್ತೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.

ಸಾರವಾಡ, ಕಣಮುಚನಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಳ್ಳಿ, ತೊನಶ್ಯಾಳ ಮತ್ತಿತರ ಡೋಣಿನದಿ ದಡದ ನೀರಾವರಿ ಯೋಜನೆ ವಂಚಿತ ಪ್ರದೇಶಕ್ಕೂ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಮಲೆವ್ವನ ಗುಡಿ ಹತ್ತಿರ ₹ 10 ಲಕ್ಷ ವೆಚ್ಚದಲ್ಲಿನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿದರು. ಗ್ರಾಮದ ಮುಸ್ಲಿಂ ಬಾಂಧವರಿಗೆ ಕಟ್ಟಡ ನಿರ್ಮಿಸಲು ಸ್ಥಳದಲ್ಲಿಯೇ ₹ 5ಲಕ್ಷ ಅನುದಾನದ ಚೆಕ್ ವಿತರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ವೇದಮೂರ್ತಿ ರುದ್ರಮುನಿ ಹಿರೇಮಠ, ತಹಶೀಲ್ದಾರ್‌ ಮಲ್ಲಿಕಾರ್ಜುನ ಅರಕೇರಿ, ಕಾರ್ಯನಿರ್ವಾಹಕ ಅಧಿಕಾರಿ ಆರ್.ಬಿ.ಬಿರಾದಾರ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಜೆ.ಎನ್.ಮಳಜಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬೋರಮ್ಮ ಹೂಗಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ವೀರಪ್ಪ ಪಾರಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಗ್ರಾಮದ ಹಿರಿಯರಾದ ರಾಚನಗೌಡ ಬಿರಾದಾರ, ಹನಮಂತ ಹೊಸಮನಿ, ಚಂದ್ರಶೇಖರ ವಾಲಿ, ಅಪ್ಪಾಸಾಹೇಬ ನಿಡೋಣಿ, ಸದಾಶಿವ ಚಿಕರೆಡ್ಡಿ, ಸೋಮನಗೌಡ ತೆನಹಳ್ಳಿ, ಮಲ್ಲಿಕಾರ್ಜುನ ನಿಂಬಾಳ, ಮುದಕಪ್ಪ ಪಾರಶೆಟ್ಟಿ, ದುಂಡಯ್ಯ ಪೂಜಾರಿ, ಮಲ್ಲನಗೌಡ ಕೋಟಿ, ಮಲ್ಲನಗೌಡ ಲಿಂಗದಳ್ಳಿ, ಶರಣಪ್ಪ ಬಿದರಿ, ಪ್ರದೀಪ ಚಿಕರೆಡ್ಡಿ ಉಪಸ್ಥಿತರಿದ್ದರು.

ನಂತರ ಬಬಲೇಶ್ವರದಲ್ಲಿ ಪಶು ಆಸ್ಪತ್ರೆಯ ₹ 21 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೆಚ್ಚುವರಿ ಕಟ್ಟಡದ ಭೂಮಿಪೂಜೆಯನ್ನು ಶಾಸಕರು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.