ಸಿಂದಗಿ: ಪಟ್ಟಣದ ಅಗ್ರೋ ಕೇಂದ್ರಗಳಲ್ಲಿ ಸಂಕೇತ, ಯುಎಸ್ ಅಗ್ರಿ ಕಂಪನಿಯ ಹತ್ತಿ ಬೀಜಗಳನ್ನು ಮತ್ತು ರಸಗೊಬ್ಬರವನ್ನು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತ ಮುಖಂಡರು ಶುಕ್ರವಾರ ಇಲ್ಲಿಯ ಕೃಷಿ ಇಲಾಖೆಯ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.
‘ಅಗ್ರೋ ಕೇಂದ್ರಗಳಲ್ಲಿ ಹತ್ತಿ ಬೀಜ ಮತ್ತು ರಸಗೊಬ್ಬರಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಖರೀದಿಸಿದ ಬೀಜಗಳ ಬಿಲ್ ಕೇಳಿದರೆ ನಮ್ಮಲ್ಲಿ ಬೀಜವೇ ಇಲ್ಲ ಹೋಗಿ ಎಂದು ವಾಪಸ್ ಕಳಿಸುತ್ತಾರೆ. ಹೀಗಾಗಿ ಸರ್ಕಾರದ ಮಾರ್ಗಸೂಚಿ ದರದ ಅನ್ವಯ ಬೀಜಗಳ ಮಾರಾಟ ಮಾಡುವಂತೆ ಕೃಷಿ ಸಹಾಯಕ ನಿರ್ದೇಶಕರು ಕ್ರಮ ಜರುಗಿಸಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ಕಲಬುರ್ಗಿ ಜಿಲ್ಲಾ ಶಾಖೆಯ ಅಧ್ಯಕ್ಷ ರಮೇಶ ಹೂಗಾರ, ಸಿಂದಗಿ ತಾಲ್ಲೂಕು ಶಾಖೆಯ ಅಧ್ಯಕ್ಷ ಧರೆಪ್ಪಗೌಡ ಎಸ್. ಬಿರಾದಾರ ಚಿಕ್ಕಹಾವಳಗಿ ಒತ್ತಾಯಿಸಿದರು.
‘ರೈತರಿಗೆ ಮೋಸ ಮಾಡುತ್ತಿರುವ ಅಗ್ರೋ ಕೇಂದ್ರಗಳ ಮೇಲೆ ದಾಳಿ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ರೈತರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಈ ವಿಷಯವನ್ನು ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದ್ದಾರೆ.
ರೈತ ಮುಖಂಡರು ಕೃಷಿ ಅಧಿಕಾರಿ ಶಿವಣ್ಣ ಗೋಂಗಿ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸಿದ್ದನಗೌಡ ಬಿರಾದಾರ, ದೇವಿಂದ್ರ ಗಾಣೂರ ಇದ್ದರು.
ಆಧಾರ ಸಹಿತ ದೂರು ಸಲ್ಲಿಕೆ
ಅಗ್ರೋ ಕೇಂದ್ರಗಳು ಹತ್ತಿ ಬೀಜ ಸಂಕೇತ ಮತ್ತು ಯು.ಎಸ್. ಅಗ್ರಿ ಬೀಜಗಳನ್ನು ಎಂಆರ್ಪಿ ದರದಂತೆ ₹ 853 ಕ್ಕೆ ಮಾರಾಟ ಮಾಡಿರುವ ಬಗ್ಗೆ ಅಂಗಡಿ ಮಾಲೀಕರು ಬಿಲ್ಗಳನ್ನು ತೋರಿಸಿದ್ದಾರೆ. ದುಬಾರಿ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಆಧಾರಸಹಿತ ದೂರು ಸಲ್ಲಿಸಿದರೆ ತಕ್ಷಣವೇ ಅಂಥ ಅಗ್ರೋ ಕೇಂದ್ರಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಎಚ್.ವೈ. ಸಿಂಗೆಗೋಳ ಸಹಾಯಕ ಕೃಷಿ ನಿರ್ದೇಶಕ ಸಿಂದಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.