ತಾಳಿಕೋಟೆ: ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 397 ನೇ ಜಯಂತ್ಯುತ್ಸವವನ್ನು ಪಟ್ಟಣದ ಕ್ಷತ್ರೀಯ ಮರಾಠಾ ಸಮಾಜ, ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ಧಿ ಸಂಘ, ಛತ್ರಪತಿ ವೀರಶಿವಾಜಿ ಸೇನೆ, ಜೀಜಾಮಾತಾ ಮಹಿಳಾ ಮಂಡಳದ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಮಧ್ಯಾಹ್ನ ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಲ್ಲಿ ಶಿವಾಜಿ ಭವ್ಯ ಮೂರ್ತಿಗೆ ಸಂತೋಷಭಟ್ಟ ಜೋಶಿ ವಿಶೇಷ ಪೂಜೆ ಸಲ್ಲಿಸಿ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಪರಪರಿ ಮತ್ತು ಕೇಸರಿ ಧ್ವಜಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ಅಥಣಿಯ ಸುಪ್ರಭಾತ ಬ್ರಾಸ್ ಬ್ಯಾಂಡ್ ಹಾಗೂ ಹಲಗೆ ಮೇಳದೊಂದಿಗೆ ಗೊಂಬೆ ಕುಣಿತ, ವಿವಿಧ ವಾದ್ಯವೈಭವಗಳು ಮತ್ತು ಶಿವಾಜಿ ಕುರಿತ ಗೀತೆಗಳಿಗೆ ತಕ್ಕಂತೆ ನೂರಾರು ಯುವ ಸಮೂಹ ಜೈ ಶಿವಾಜಿ, ಜೈಭವಾನಿ ಘೋಷವಾಕ್ಯ ಮೊಳಗಿಸುತ್ತ ನೃತ್ಯ ಮಾಡಿದರು.
ಮೆರವಣಿಗೆಯು ಶಿವಭವಾನಿ ಮಂದಿರವಕ್ಕೆ ತಲುಪಿದ ನಂತರ ಶಿವಾಜಿ ತೊಟ್ಟಿಲು ಕಾರ್ಯಕ್ರಮ, ಶಿವಭವಾನಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಉತ್ಸವದಲ್ಲಿ ಸಮಾಜದ ಅಧ್ಯಕ್ಷ ಸಂಬಾಜಿ ವಾಡಕರ, ಉಪಾಧ್ಯಕ್ಷ ಅಣ್ಣಾಜಿ ಜಗತಾಪ, ಕಾರ್ಯದರ್ಶಿ ಕಾಶಿರಾಯ ಮೋಹಿತೆ, ಪ್ರಮುಖರಾದ ಬಸವಂತ್ರಾಯ ಸುಭೇದಾರ, ಜಿ.ಟಿ.ಘೋರ್ಪಡೆ, ಶಶಿಧರ ಡಿಸಲೆ, ಸಂಭಾಜಿ ಡಿಸಲೆ, ಗುಂಡುರಾವ್ ಜಗತಾಪ ಸೇರಿದಂತೆ, ವಿವಿಧ ಸಮಾಜದ ಮುಖಂಡರು, ಹಿಂದೂಪರ ಸಂಘಟನೆಗ ಮುಖಂಡರು ಭಾಗವಹಿಸಿದ್ದರು. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಜೆ.ಎಸ್.ಜಿ.ಪಿಯು ಕಾಲೇಜಿನ ಉಪನ್ಯಾಸಕ ದಿನಕರ ಜೋಶಿ ವಿಶೇಷ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.