ADVERTISEMENT

ದೇವರಹಿಪ್ಪರಗಿ: ಒಣ ಮೇವು ಸಂಗ್ರಹಕ್ಕೆ ರೈತರ ಚಿತ್ತ

ಹಸಿ ಮೇವು ಕೊರತೆ: ಮೇವಿನ ಬ್ಯಾಂಕ್‌ ಪ್ರಾರಂಭಿಸಲು ಆಗ್ರಹ

ಅಮರನಾಥ ಹಿರೇಮಠ
Published 6 ಮಾರ್ಚ್ 2024, 4:58 IST
Last Updated 6 ಮಾರ್ಚ್ 2024, 4:58 IST
ದೇವರಹಿಪ್ಪರಗಿ ಪಟ್ಟಣದಲ್ಲಿ ರೈತರು ತಾವು ಖರೀದಿಸಿದ ಒಣಮೇವನ್ನು ಟ್ರ್ಯಾಕ್ಟರ್ ಮೂಲಕ ಮುಳಸಾವಳಗಿ ಗ್ರಾಮಕ್ಕೆ ಸಾಗಿಸುತ್ತಿರುವುದು
ದೇವರಹಿಪ್ಪರಗಿ ಪಟ್ಟಣದಲ್ಲಿ ರೈತರು ತಾವು ಖರೀದಿಸಿದ ಒಣಮೇವನ್ನು ಟ್ರ್ಯಾಕ್ಟರ್ ಮೂಲಕ ಮುಳಸಾವಳಗಿ ಗ್ರಾಮಕ್ಕೆ ಸಾಗಿಸುತ್ತಿರುವುದು   

ದೇವರಹಿಪ್ಪರಗಿ: ಮುಂಗಾರು ಹಾಗೂ ಹಿಂಗಾರು ಸೇರಿದಂತೆ ಕಳೆದ ವರ್ಷದಲ್ಲಿ ಮಳೆಗಾಲದ ಅಭಾವದ ಹಿನ್ನೆಲೆಯಲ್ಲಿ ಜಾನುವಾರಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ರೈತ ಸಮುದಾಯ ಮುಂದಾಗಿದ್ದು ಒಣಮೇವು ಸಂಗ್ರಹದತ್ತ ಚಿತ್ತ ಹರಿಸಿದೆ.

ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮಳೆಗಾಲ ಕೈಕೊಟ್ಟ ಪರಿಣಾಮ ಒಂದೆಡೆ ತೊಗರಿ, ಜೋಳ ಸೇರಿದಂತೆ ಬಿತ್ತನೆಯಾದ ಬಹುತೇಕ ಎಲ್ಲ ಬೆಳೆಯ ಫಸಲು ಬಾರದಂತಾಗಿ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ ಜಾನುವಾರಗಳಿಗೆ ಮೇವು ಒದಗಿಸಲು ಪರದಾಡುವಂತಾಗಿದೆ.

ಬೇಸಿಗೆಗಾಗಿ ಜಾನುವಾರಗಳಿಗೆ ಅಗತ್ಯವಾದ ಒಣಮೇವನ್ನು ದೂರದ ಗ್ರಾಮಗಳಿಂದ ಖರೀದಿಸಿ ಟ್ರ್ಯಾಕ್ಟರ್‌ಗಳ ಮೂಲಕ ತಂದು ಸಂಗ್ರಹಿಸಲಾಗುತ್ತಿದೆ. ಆಕಳು, ಎತ್ತು, ಎಮ್ಮೆಗಳಿಗೆ ಅಗತ್ಯವಾದ ಜೋಳದ ಮೇವು ಈಗ ದೊರೆಯದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಒಣಮೇವನ್ನೇ ಒಂದು ಟ್ರ್ಯಾಲಿಗೆ ₹10 ಸಾವಿರದವರೆಗೆ ಹಣ ನೀಡಿ ರೈತರು ಕೊಳ್ಳುತ್ತಿದ್ದಾರೆ.

ADVERTISEMENT

ಒಂದು ಟ್ರ್ಯಾಲಿ ಮೆಕ್ಕೆಜೋಳ ಮೇವು 2 ಎತ್ತುಗಳಿಗೆ ಒಂದು ತಿಂಗಳು ಸಾಲುತ್ತದೆ. ಆಕಳು, ಎಮ್ಮೆಗಳಿಗೆ ಪ್ರತ್ಯೇಕವಾಗಿ ಖರೀದಿಸಬೇಕು. ನೀರಿನ ಕೊರತೆಯಿಂದ ಹಸಿಮೇವು ಸಿಗುವುದು ದೂರದ ಮಾತು. ಮುಂದಿನ ಮಳೆಗಾಲದವರೆಗೆ ಅಗತ್ಯ ಮೇವನ್ನು ದೇವರಹಿಪ್ಪರಗಿ ಪಟ್ಟಣದ ಸಂಬಂಧಿ ರೈತರಿಂದ ಖರೀದಿಸಿ ಸಂಗ್ರಹಿಸುತ್ತಿದ್ದೇವೆ. ಈ ಮೇವು ಮುಂದಿನ ಮಳೆಗಾಲದವರೆಗೆ ಸಾಲಬಹುದು ಎಂಬ ಭರವಸೆಯಿದೆ ಎನ್ನುತ್ತಾರೆ ಮುಳಸಾವಳಗಿ ಗ್ರಾಮದ ರೈತರಾದ ಶಿವಾನಂದ ನಾಗರಳ್ಳಿ, ರುದ್ರಗೌಡ ಬಿರಾದಾರ, ಹಾಗೂ ಮಾದೇವಪ್ಪ ಬಿರಾದಾರ.

ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮೊದಲೇ ಮೇವು ಸಂಗ್ರಹಣೆಗೆ ಮುಂದಾಗುತ್ತೇವೆ. ಬೇಸಿಗೆ ಸಮಯದಲ್ಲಿ ಸರ್ಕಾರ ಮೇವು ಬ್ಯಾಂಕ್ ಪ್ರಾರಂಭಿಸಿ ಮೇವು ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅದೇ ಗ್ರಾಮದ ಬಸವರಾಜ ಕಲ್ಲೂರ, ವಿರುಪಾಕ್ಷಿ ರೋಡಗಿ, ಶಿವಾನಂದ ಹಡಪದ.

ವರ್ಷದಿಂದ ವರ್ಷಕ್ಕೆ ಜೋಳ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜೋಳದ ಮೇವಿನ ಅಭಾವ ಎದ್ದು ಕಾಣುತ್ತಿದೆ. ಅದರಲ್ಲೂ ಈಗೀಗ ನಮ್ಮ ತಾಲ್ಲೂಕಿನಲ್ಲಿ ತೊಗರಿ, ಕಬ್ಬು ಬೆಳೆಯುವವರೇ ಹೆಚ್ಚಾಗುತ್ತಿದ್ದಾರೆ. ಮಳೆಗಾಲದಲ್ಲಿ ಹಸಿರು ಮೇವಿಗೆ ಕೊರತೆಯಿಲ್ಲ. ಆದರೆ ಮುಂದಿನ ಆರು ತಿಂಗಳು ದನಕರುಗಳು ಮೇವಿಗಾಗಿ ಅಲೆಯುವಂತಾಗುತ್ತದೆ. ಆದ್ದರಿಂದ ಬಹುತೇಕ ರೈತರು ತಮ್ಮಲ್ಲಿಯ ದನಕರುಗಳನ್ನು ಮಾರಲು ಮುಂದಾಗುತ್ತಾರೆ ಎನ್ನುತ್ತಾರೆ ಕಡ್ಲೇವಾಡ ಪಿಸಿಎಚ್ ಗ್ರಾಮದ ಶೇಖು ಗಣಜಲಿ, ಶ್ರೀಶೈಲ ಕಬಾಡಗಿ.

ತಾಲ್ಲೂಕು ಆಡಳಿತ ಜಾನುವಾರಗಳಿಗೆ ಅಗತ್ಯವಾದ ಮೇವಿಗಾಗಿ ಪಶು ಆಸ್ಪತ್ರೆಯ ಆವರಣದಲ್ಲಿ ಮೇವು ಬ್ಯಾಂಕ್ ಆರಂಭಿಸಿ ರೈತ ಸಮುದಾಯಕ್ಕೆ ಅನುಕೂಲ ಮಾಡಿದರೆ ರೈತರು ಅಲೆಯುವುದು ತಪ್ಪುತ್ತದೆ.
ಕಾಸುಗೌಡ ಬಿರಾದಾರ(ಜಲಕತ್ತಿ), ಸದಸ್ಯರು, ಪಟ್ಟಣ ಪಂಚಾಯಿತಿ ದೇವರಹಿಪ್ಪರಗಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.