ADVERTISEMENT

ದುಶ್ಚಟಗಳಿಂದ ದೂರವಿರಿ: ಬೀಳೂರು ಶ್ರೀ

ಸಿದ್ಧೇಶ್ವರ ಸ್ವಾಮೀಜಿ 80ನೇ ಜಯಂತಿ ಉತ್ಸವ‘ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:24 IST
Last Updated 26 ಅಕ್ಟೋಬರ್ 2025, 7:24 IST
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬೀಳೂರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬೀಳೂರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು   

ತಿಕೋಟಾ: ವಿಶ್ವಕ್ಕೆ ಅಧ್ಯಾತ್ಮದ ಮೂಲಕ ಜ್ಞಾನದ ಬೆಳಕನ್ನು ಹರಡಿಸಿದ ಪೂಜ್ಯ ಸಿದ್ದೇಶ್ವರ ಶ್ರೀಗಳ ಜನ್ಮ ಸ್ಥಳ ಬಿಜ್ಜರಗಿ ಗ್ರಾಮವು ದುಶ್ಚಟಗಳಿಂದ ದೂರವಿರಬೇಕು ಎಂದು ಬೀಳೂರ ವಿರಕ್ತಮಠದ ಚನ್ನಬಸವ ಗುರುಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಬುಧವಾರ ನಡೆದ ಸಿದ್ದೇಶ್ವರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮವು ಸಾರಾಯಿ ಮತ್ತು ಮಾಂಸ ಮುಕ್ತವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಿದ್ಧೇಶ್ವರ ಶ್ರೀಗಳ ಜಯಂತ್ಯುತ್ಸವದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕನಮಡಿ, ಜ್ಞಾನಯೋಗ ಲಯನ್ಸ್ ಕ್ಲಬ್ ಬೆಂಗಳೂರು ಮತ್ತು ಶಿವಾನುಭವ ಸೇವಾ ಸಮಿತಿ ಬಿಜ್ಜರಗಿ ಇವರ ಸಹಯೋಗದೊಂದಿಗೆ ಉಚಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಮುಗಳಖೋಡ ಸ್ವಾಮೀಜಿ ಉದ್ಘಾಟಿಸಿದರು.

ADVERTISEMENT

ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಹಾಗೂ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಗಳನ್ನು ಹೊತ್ತ ಎತ್ತಿನ ಬಂಡಿಗಳ ಮೆರವಣಿಗೆ ಸಕಲ ವಾದ್ಯಮೇಳ ಹಾಗೂ ಸದ್ಭಕ್ತರೊಂದಿಗೆ ಶ್ರೀಗಳ ಪೂರ್ವಾಶ್ರಮದ ಮನೆಯಿಂದ ಹೊರಟು ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀಗಳು ವ್ಯಾಸಂಗ ಮಾಡಿದ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ ಬಂದು ತಲುಪಿತು. ಶಾಲಾ ಆವರಣದಲ್ಲಿ ಪೂಜ್ಯರ ಭಾವಚಿತ್ರಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿತು. ನಂತರ 60 ವರ್ಷ ಮೇಲ್ಪಟ್ಟವರಿಗೆ ವಿಶೇಷ ಆರೋಗ್ಯ ತಪಾಸಣೆ ಮಾಡಲಾಯಿತು.

ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳು, ಮಧುಮೇಹ , ರಕ್ತದೊತ್ತಡ, ರಕ್ತಹೀನತೆಯ ಕುರಿತು ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಸುಮಾರು ಐವತ್ತು ಜನ ರಕ್ತದಾನ ಮಾಡಿದರು. ಸಂಜೆ 5ಕ್ಕೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳವರ ಸನ್ಯಾಸ ದೀಕ್ಷಾ ಶತಮಾನೋತ್ಸವ ಹಾಗೂ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರರ 85ನೇ ಜಯಂತ್ಯುತ್ಸವ ಕಾರ್ಯಕ್ರಮವು ಜರುಗಿತು.

ಈ ಸಂದರ್ಭದಲ್ಲಿ ಪ್ರಸ್ತುತ 2025 -26ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವೃತ್ತಿ ಪರ ಶಿಕ್ಷಣ ಪ್ರವೇಶ ಪಡೆದ ಬಿಜ್ಜರಗಿ ಗ್ರಾಮದ ಪ್ರತಿಭಾನ್ವಿತ 11ವಿದ್ಯಾರ್ಥಿಗಳಿಗೆ ಶಿವಾನುಭವ ಸೇವಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧನೆಗೈದ ವ್ಯಕ್ತಿಗಳಿಗೆ ಸನ್ಮಾನ ಜರುಗಿತು.

ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರದ್ಧಾನಂದ ಸ್ವಾಮಿಗಳು, ಬೀಳೂರಿನ ಚನ್ನಬಸವ ಗುರುಬಸವ ಸ್ವಾಮಿಗಳು, ಕಾಖಂಡಕಿಯ ಶಿವಯೋಗೀಶ್ವರ ಸ್ವಾಮೀಜಿ, ಕಕಮರಿಯ ಆತ್ಮಾರಾಮ ಸ್ವಾಮೀಜಿ, ಸೋಮಲಿಂಗ ಪಾಟೀಲ್, ರಾಜೀವ ಮಸಳಿ, ಮಹೇಶಗೌಡ ಪಾಟೀಲ್, ಶಿವಾನಂದ ಲೋಣಿ, ಬಿ.ಜಿ.ಜಮಖಂಡಿ, ಉಮೇಶ ಬಿರಾದಾರ, ಗುರುಗೌಡ ಬಿರಾದಾರ, ಲವ ಚವ್ಹಾಣ, ಅಶೋಕ ಮಸಳಿ, ಪ್ರಾಸ್ತಾವಿಕ ಮಾತು ಸೋಮಲಿಂಗ ಪಾಟೀಲ, ರವಿ ಬಿರಾದಾರ, ಶಿವಲಿಂಗ ದವಳೇಶ್ವರ, ರಾಜು ಸೌದಿ, ರಾಜೀವ ಮಸಳಿ ಆರೋಗ್ಯ ಸಿಬ್ಬಂದಿ, ಶಾಲಾ ಶಿಕ್ಷಕರು ಮತ್ತು ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.