
ಕಕ್ಕಳಮೇಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಭಗ್ನ ಮಾಡಿರುವ ಆರೋಪಿಗಳ ಹೆಸರು ಬಹಿರಂಗಪಡಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಸಿಂದಗಿ ನಗರದ ತಾಲ್ಲೂಕು ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿದರು
ಸಿಂದಗಿ: ಕಕ್ಕಳಮೇಲಿ ಗ್ರಾಮದಲ್ಲಿ 2019 ಅ. 15 ರಂದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಮೂರ್ತಿ ಭಗ್ನಗೊಳಿಸಿರುವ ಕೃತ್ಯದಲ್ಲಿ ದಲಿತ ವ್ಯಕ್ತಿಗಳೇ ಭಾಗಿಗಳಾಗಿದ್ದಾರೆ. ವೈಯಕ್ತಿಕ ದ್ವೇಷ ಸಾಧಿಸಲು ಅಂಬೇಡ್ಕರ್ ಮೂರ್ತಿ ಮುಂದಿಟ್ಟುಕೊಂಡು ತಾವೇ ಮೂರ್ತಿ ಭಗ್ನಗೊಳಿಸಿ ಬೇರೆಯವರ ಹೆಸರಿಗೆ ಗೂಬೆ ಕೂರಿಸುವ ಕೆಲಸ ಮಾಡಲಾಗಿರುವುದನ್ನು ತನಿಖೆಯಿಂದ ಪತ್ತೆ ಮಾಡಿದ್ದಾರೆ ಎಂದು ಇಂಡಿ ಉಪವಿಭಾಗ ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಸ್ಪಷ್ಟಪಡಿಸಿದರು.
ನಗರದ ತಾಲ್ಲೂಕು ಪ್ರಜಾಸೌಧದ ಎದುರು ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಕಾರರಿಂದ ಅವರು ಮನವಿ ಸ್ವೀಕರಿಸಿ ಮಾತನಾಡಿದರು.
ಸುದೀರ್ಘ ವಿಚಾರಣೆ ನಡೆಸಿದ ಸಂದರ್ಭದಲ್ಲಿ ತನಿಖೆಯಲ್ಲಿ 12 ಜನ ಆರೋಪಿಗಳೊಂದಿಗೆ ಹೆಚ್ಚುವರಿ 4 ಆರೋಪಿಗಳು ಸೇರಿ ಒಟ್ಟು 16 ಜನ ಅರೋಪಿಗಳಿದ್ದಾರೆ. ಪ್ರಮುಖವಾಗಿ ಯಲ್ಲಪ್ಪನ ಚಿತಾವಣೆಯಿಂದ ಮಡಿವಾಳಪ್ಪ, ನಿಂಗಪ್ಪ, ಮರೆಪ್ಪ, ಸಿದ್ದಪ್ಪ ಹೀಗೆ ದಲಿತ ಸಮುದಾಯದವರೇ ಮೂರ್ತಿ ಭಗ್ನಗೊಳಿಸಿದ್ದಾರೆ ಎಂಬುದಾಗಿ ಅಂದಿನ ಇಂಡಿ ಡಿವೈಎಸ್ಪಿ ಅವರು ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ತಿಳಿಸಿದರು.
ಭಾರತದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಅಡಿಯಲ್ಲಿ ಜೀವನ ಮಾಡಬೇಕಾಗಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ ರಿಗೆ ಅನ್ಯಾಯ ಮಾಡಿದರೆ ಯಾರೂ ಸಹಿಸುವುದಿಲ್ಲ. ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವ ದಿಸೆಯಲ್ಲಿ ಕಾನೂನುಬದ್ದ ಕಾರ್ಯ ಮಾಡುತ್ತದೆ ಎಂದು ಹೇಳಿದರು.
ಪ್ರತಿಭಟನಕಾರರು ತಹಶೀಲ್ದಾರ್ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಅವರಿಗೂ ಮನವಿ ಸಲ್ಲಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕರಾದ ಅಶೋಕ ಚಲವಾದಿ, ಶರಣು ಸಿಂಧೆ, ಪ್ರಕಾಶ ಗುಡಿಮನಿ, ಶ್ರೀಕಾಂತ ಸೋಮಜಾಳ, ಲಕ್ಕಪ್ಪ ಬಡಿಗೇರ, ಮಂಜುನಾಥ ಎಂಟಮಾನ, ರಾಜಕುಮಾರ ಸಿಂದಗಿರಿ, ಸುಭದ್ರಾ ಮೇಲಿನಮನಿ, ಪರುಶರಾಮ ದಿಂಡವಾರ, ರವಿ ಚಾಣದಕವಠೆ, ವೀರಪ್ಪ ಕಟ್ಟಿಮನಿ, ವಿಕಾಶ ಕಾಳೆ, ಅನಿಲ ಬಡಿಗೇರ, ಶಿವೂ ಹೊಸಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಗಳ ಹೆಸರು ಬಹಿರಂಗಗೊಂಡ ಕಾರಣ ಡಾ.ಅಂಬೇಡ್ಕರ್ ವೃತ್ತದಲ್ಲಿ ಅನಿರ್ದಿಷ್ಟ ಕಾಲ ನಡೆಯಬೇಕಿದ್ದ ಧರಣಿ ಸತ್ಯಾಗ್ರಹ ಸ್ಥಗಿತಗೊಂಡಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.