ADVERTISEMENT

ಸೋಲಾಪುರ | ₹393.79 ಕೋಟಿ ಪರಿಹಾರ ಅವಶ್ಯ

ಮಹಾರಾಷ್ಟ್ರ ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:22 IST
Last Updated 29 ಸೆಪ್ಟೆಂಬರ್ 2025, 7:22 IST
ಸೋಲಾಪುರ ಜಿಲ್ಲೆಯ ಮೊಹೋಳ ತಾಲ್ಲೂಕಿನ ನಂದಗಾವ ಗ್ರಾಮದಲ್ಲಿ  ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಅವರು ರೈತರಿಗೆ ಗೃಹೋಪಯೋಗಿ ಕಿಟ್ ವಿತರಿಸಿದರು 
ಸೋಲಾಪುರ ಜಿಲ್ಲೆಯ ಮೊಹೋಳ ತಾಲ್ಲೂಕಿನ ನಂದಗಾವ ಗ್ರಾಮದಲ್ಲಿ  ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಅವರು ರೈತರಿಗೆ ಗೃಹೋಪಯೋಗಿ ಕಿಟ್ ವಿತರಿಸಿದರು    

ಸೋಲಾಪುರ: ‘ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ 10.21 ಲಕ್ಷ ಎಕರೆ ಕೃಷಿಭೂಮಿಗೆ ಹಾನಿಯಾಗಿದೆ. ಅಂದಾಜಿನ ಪ್ರಕಾರ ₹393.79 ಕೋಟಿ ಪರಿಹಾರ ನಿಧಿಯ ಅವಶ್ಯವಿದೆ’ ಎಂದು ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಹೇಳಿದರು.

ಮಾಢಾ ತಾಲ್ಲೂಕಿನ ಉಂದರಗಾವ ಹಾಗೂ ಮೊಹೋಳ ತಾಲ್ಲೂಕಿನ ಪಾಸಲೆವಾಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು.

‘ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಅಜಿತ್‌ ಪವಾರ ನೇತೃತ್ವದ ಸಚಿವರ ಸಭೆಯಲ್ಲಿ ಚರ್ಚಿಸಿ, ಪ್ರವಾಹ ಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ನೀಡಲಾಗುವುದು’ ಎಂದರು.

ADVERTISEMENT

‘ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯು ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಕೈಗೊಂಡಿವೆ. ಒಟ್ಟಾರೆ ₹2,215 ಕೋಟಿ ಪರಿಹಾರವನ್ನೂ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದಲೂ ನೆರವು ನೀಡಲು ಕೇಂದ್ರ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ತಾಲ್ಲೂಕಿನ ಪಾಸಲೆವಾಡಿ ಹಾಗೂ ನಂದಗಾವ ಗ್ರಾಮಗಳಲ್ಲಿ ಎಂಐಟಿ ಸಂಸ್ಥೆಯಿಂದ ನೀಡಿದ ಗೃಹೋಪಯೋಗಿ ಕಿಟ್‌ಗಳನ್ನು ಸಚಿವರು, ರೈತರಿಗೆ ವಿತರಿಸಿದರು.

ರಾಜ್ಯ ಸಹಕಾರ ಪರಿಷತ್‌ ಅಧ್ಯಕ್ಷ ರಾಜನ ಪಾಟೀಲ, ಮಾಢಾ ಶಾಸಕ ಅಭಿಜಿತ ಪಾಟೀಲ, ಮೊಹೋಳ ಶಾಸಕ ರಾಜು ಖರೆ, ಉಮೇಶ ಪಾಟೀಲ, ಜಿಲ್ಲಾ ಅಧೀಕ್ಷಕ ಕೃಷಿ ಅಧಿಕಾರಿ ಶುಕ್ರಾಚಾರ್ಯ ಭೋಸ್ಲೆ ಇದ್ದರು.

28SLP 02
‘4.28 ಲಕ್ಷ ರೈತರಿಗೆ ನಷ್ಟ’
‘ಸೀನಾ ಹಾಗೂ ಭೀಮಾ ನದಿಗಳ ಪ್ರವಾಹದಿಂದ ಜಿಲ್ಲೆಯ 11 ತಾಲ್ಲೂಕುಗಳ 877 ಗ್ರಾಮಗಳಿಗೆ ತೊಂದರೆ ಉಂಟಾಗಿದೆ. ದಕ್ಷಿಣ ಹಾಗೂ ಉತ್ತರ ಸೋಲಾಪುರ ಅಕ್ಕಲಕೋಟ ಮಾಢಾಕರಮಳಾ ಮಂಗಳವೇಡ ಪಂಢರಪುರ ಸಾಂಗೋಲಾ ಮಾಳಸಿರಸ ಇತರೆ ತಾಲ್ಲೂಕುಗಳಲ್ಲೂ ಸಮಸ್ಯೆಯಾಗಿದೆ. ಒಟ್ಟು 4.28 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಇವರಿಗೆ ನೆರವಾಗುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.