ವಿಜಯಪುರ: ‘ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗುವ ಜತೆಗೆ ಓದಿನಲ್ಲೂ ಹೆಚ್ಚು ಆಸಕ್ತಿ ಬರುತ್ತದೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕಿ ಡಾ.ಜ್ಯೋತಿ ಉಪಾಧ್ಯಾಯ ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ ಮಾತನಾಡಿ, ‘ಭಾರತವನ್ನು ಅತ್ಯಂತ ಸದೃಢ ದೇಶವಾಗಿ ಕಟ್ಟಲು ಕ್ರೀಡಾಪಟುಗಳ ಪಾತ್ರ ಪ್ರಮುಖವಾಗಿದೆ. ಜಾಗತಿಕ ಮಟ್ಟದಲ್ಲಿ ದೇಶದ ಅಭಿವೃದ್ಧಿಯಲ್ಲಿ ರಾಜ್ಯದ ಕ್ರೀಡಾಪಟುಗಳು ಹೆಚ್ಚು ಭಾಗವಹಿಸಬೇಕು’ ಎಂದು ಆಶಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಯುವ ಜನೋತ್ಸವ ಸಮಿತಿ ಸದಸ್ಯ ಡಾ.ಜಾವೀದ ಎಂ.ಜಮಾದಾರ ಮಾತನಾಡಿ, ‘ನಾಡ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತೇವೆ. ಅದರ ಅಂಗವಾಗಿ ಈ ಕ್ರೀಡಾಕೂಟ ಆಯೋಜಸಿಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಇಂತಹ ಕ್ರೀಡಾಕೂಟಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಬ್ಯಾಡ್ಮಿಂಟನ್ನಲ್ಲಿ ಪಿ.ವಿ.ಸಿಂಧು ಅವರು ಚಿನ್ನದ ಪದಕ ತಂದು ಕೊಟ್ಟು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜನಸಂಖ್ಯೆಯಲ್ಲಿ ನಮ್ಮ ದೇಶ ಮುಂದೆ ಇದೆ. ಆದರೆ, ಕ್ರೀಡೆಯಲ್ಲಿ ಉತ್ತಮ ಸಾಧನೆಯಿಲ್ಲ. ಅದಕ್ಕಾಗಿಯೇ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕ್ರೀಡಾಪಟುಗಳನ್ನು ಪ್ರೊತ್ಸಾಹಿಸಲು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿವೆ’ ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸಂಜೀವ ಖೋತ ಹಾಗೂ ಸಂತೋಷ ನಿಗದಿ ಮಾತನಾಡಿದರು. ಸೈಕ್ಲಿಂಗ್ ತರಬೇತುದಾರರಾದ ಅಲ್ಕಾ ಫಡತಾರೆ, ಜುಡೋ ತರಬೇತುದಾರರಾದ ತ್ರೀವೇಣಿ, ಸಲಾವುದ್ದೀನ್ ಇದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಸ್ವಾಗತಿಸಿದರು. ಎನ್.ಎಸ್.ಬಿರಾದಾರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.