ADVERTISEMENT

ಅಭಿವೃದ್ಧಿ ಯೋಜನೆಗಳಿಗೆ ಅಂಕಿ-ಅಂಶ ಆಧಾರ

ಜಿಲ್ಲೆಯ ಅಂಕಿ-ಅಂಶಗಳ ನೋಟ ಪುಸ್ತಕ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಸುನೀಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 15:16 IST
Last Updated 12 ಏಪ್ರಿಲ್ 2021, 15:16 IST
ವಿಜಯಪುರ ಜಿಲ್ಲಾ ಅಂಕಿ-ಅಂಶಗಳ ನೋಟ ಪುಸ್ತಕವನ್ನು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಬಿಡುಗಡೆಗೊಳಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ(ಪ್ರಭಾರ) ಎಸ್.ವಿ.ನಾವಿ ಇದ್ದಾರೆ
ವಿಜಯಪುರ ಜಿಲ್ಲಾ ಅಂಕಿ-ಅಂಶಗಳ ನೋಟ ಪುಸ್ತಕವನ್ನು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಬಿಡುಗಡೆಗೊಳಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ(ಪ್ರಭಾರ) ಎಸ್.ವಿ.ನಾವಿ ಇದ್ದಾರೆ   

ವಿಜಯಪುರ:ಜಿಲ್ಲೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮತ್ತಿತರ ಚಟುವಟಿಕೆಗಳ ಬಗೆಗಿನ ಮಹತ್ವದ ಅಂಕಿ-ಅಂಶಗಳನ್ನು ಒಳಗೊಂಡ 2019-20 ನೇ ಸಾಲಿನ ಜಿಲ್ಲಾ ಅಂಕಿ-ಅಂಶಗಳ ನೋಟ ಕೈಪಿಡಿಯನ್ನು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಏಳನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಉಸ್ತುವಾರಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಅಂಕಿ-ಅಂಶಗಳ ನೋಟ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,ಶಿಕ್ಷಣ, ಸಂಶೋಧನೆ, ಯೋಜನೆ, ಇತ್ಯಾದಿ ಉದ್ದೇಶಗಳಿಗೆ ಈ ಅಂಕಿ-ಅಂಶಗಳು ಆಧಾರವಾಗಲಿವೆ.ಸಾರ್ವಜನಿಕರಿಗೆ ಇದರ ಸದುಪಯೋಗವಾಗಲಿದೆ ಎಂದರು.

7ನೇ ಆರ್ಥಿಕ ಗಣತಿಯ ಬಗ್ಗೆ ಮಾಹಿತಿ ನೀಡಿದಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ(ಪ್ರಭಾರ) ಎಸ್.ವಿ.ನಾವಿ, ಈ ಗಣತಿ ಅನ್ವಯ ಜಿಲ್ಲೆಯ ಬಸವನ ಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ ಹಾಗೂ ಸಿಂದಗಿ ತಾಲ್ಲೂಕುಗಳಲ್ಲಿ 680 ಜನ ವಸತಿ ಗ್ರಾಮಗಳು, 13 ಜನ ವಸತಿ ಇಲ್ಲದ ಗ್ರಾಮಗಳನ್ನು ಗುರುತಿಸಲಾಗಿದೆ. 213 ಗ್ರಾಮ ಪಂಚಾಯಿತಿ, 15 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 150 ವಾರ್ಡ್‌ಗನ್ನು ಗುರುತಿಸಲಾಗಿದೆ ಎಂದರು.

ADVERTISEMENT

7 ನೇ ಆರ್ಥಿಕ ಗಣತಿ ಪ್ರಕಾರ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ 36,244 ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ 46,748 ಸೇರಿದಂತೆ ಒಟ್ಟು 82,992 ಉದ್ಯಮಗಳು ಇರುವುದಾಗಿ ತಿಳಿಸಿದರು.

6 ನೇ ಆರ್ಥಿಕ ಗಣತಿಯಲ್ಲಿ 60,427 ಉದ್ಯಮಿಗಳಿದ್ದವು, 7ನೇ ಆರ್ಥಿಕ ಗಣತಿಯಲ್ಲಿ 82,992 ಉದ್ಯಮಗಳು ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿ 22,565 ಉದ್ಯಮಗಳು ಹೆಚ್ಚಳವಾಗಿರುವುದು ಆರ್ಥಿಕ ಗಣತಿಯಿಂದ ತಿಳಿದುಬಂದಿದೆ ಎಂದರು.

ಉದ್ಯಮ ವಲಯದಲ್ಲಿ ಶೇ 134.29 ರಷ್ಟು ಹೆಚ್ಚು ಬೆಳವಣಿಗೆ ಕಂಡು ಬಂದಿದ್ದು, ಈ ಕುರಿತು ಸಾಂಖ್ಯಿಕ ಇಲಾಖೆಯಿಂದ ಮರುಪರಿಶೀಲನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ದತ್ತಾಂಶ ಮಂಡಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸುವ ಕುರಿತು ಚರ್ಚಿಸಲಾಯಿತು.

***

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿ ಜಿಲ್ಲೆಯ ಅಂಕಿ-ಅಂಶಗಳ ನೋಟ ಪ್ರಕಟಿಸಿರುವುದು ಶ್ಲಾಘನೀಯ

ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.