
ಇಂಡಿ: ತಾಲ್ಲೂಕಿನ ಹಿರೇಬೇವನೂರ ಸಕ್ಕರೆ ಕಾರ್ಖಾನೆ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ನಾದ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಪ್ರತಿ ಟನ್ ಕಬ್ಬಿನ ₹3 ಸಾವಿರ ಬೆಲೆ ನಿಗದಿ ಪಡಿಸಿದ್ದರೂ ರೈತರು ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಟ ಮಾಡುತ್ತಿರುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಕೆಂಬೋಗಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆದಿರುವ ಇಂಡಿ ತಾಲ್ಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಪ್ರತಿ ದಿನ ಮೂರು ಸಾವಿರ ಟನ್ ಪ್ರತಿ ದಿನ ಪ್ರತಿ ಕಾರ್ಖಾನೆ ನುರಿಸುತ್ತಿದೆ. ಆದರೂ ಮಹಾರಾಷ್ಟ್ರದ ರಾಜ್ಯಕ್ಕೆ ಕಬ್ಬು ಸಾಗಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಸೋಲಾಪುರದ ಸಿದ್ದೇಶ್ವರ, ಲೋಕಮಂಗಲ, ಸಿದ್ದನಾಥ ಮತ್ತು ಅಕ್ಕಲಕೋಟದ ಜೈನ ಸಕ್ಕರೆ ಕಾರ್ಖಾನೆ ಸೇರಿದಂತೆ ಚಡಚಣ ಭಾಗದ ಕಬ್ಬು ಮಹಾರಾಷ್ಟ್ರದ ಮಂಗಳವೇಡಾ, ಜತ್ತ ಇತರೆ ಕಾರ್ಖಾನೆಗಳಿಗೆ ಪ್ರತಿದಿನ 10 ಸಾವಿರ ಟನ್ಗೂ ಅಧಿಕ ಕಬ್ಬು ರವಾನೆಯಾಗುತ್ತಿದೆ. ಅದಲ್ಲದೆ, ಮಹಾರಾಷ್ಟ್ರದ ಬಹುತೇಕ ಕಾರ್ಖಾನೆಗಳು ಈಥೆನಾಲ್ ಘಟಕ ಹೊಂದಿದ್ದು, ಹಣ ನೀಡಲು ಪೈಪೋಟಿ ಒಡ್ಡುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ತೆರಿಗೆ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಧೂಳಖೇಡ, ಇಂಡಿ ತಾಲ್ಲೂಕಿನ ಅಗರಖೇಡ, ಎರಡು ರಾಜ್ಯಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ನಾಲ್ಕು ಬ್ಯಾರೇಜುಗಳು ಮತ್ತು ಚಡಚಣ ತಾಲ್ಲೂಕಿನಿಂದ ಶಿರಾಡೋಣಗಳಲ್ಲಿ ಕಬ್ಬು ಸಾಕಾಣಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಬೇಕು, ಪೊಲೀಸ್, ಆರ್.ಟಿ.ಒ ಅಧಿಕಾರಿಗಳು ಕರ್ನಾಟಕಕ್ಕೆ ಆಗುವ ಹಾನಿ ತಪ್ಪಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದ ಕಬ್ಬು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಪೂರೈಕೆಯಾಗುವುದರಿಂದ ತೆರಿಗೆ ನಷ್ಟವಾಗುತ್ತದೆ. ಸರ್ಕಾರ ಯಾವುದೇ ಲಾಬಿಗೆ ಮಣಿಯದೇ ಮೂಗುದಾರ ಹಾಕಬೇಕುಎಸ್.ಬಿ.ಕೆಂಬೋಗಿಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.