
ತಾಳಿಕೋಟೆ: ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ನಿರ್ಮಾಣಕ್ಕೆ ಆಯ್ಕೆ ಮಾಡಿದ ಸ್ಥಳ ಪಟ್ಟಣದಿಂದ 4 ರಿಂದ 5 ಕಿ.ಮೀ ದೂರ ಇರುವುದರಿಂದ ತಾಲ್ಲೂಕಿನ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ, ಇದನ್ನು ರದ್ದು ಪಡಿಸಿ ಪಟ್ಟಣದಲ್ಲಿಯೇ ಇರುವ ಹಲವು ಸರ್ಕಾರಿ ಸ್ಥಳಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಫೆ. 25ರಂದು ತಾಳಿಕೋಟೆ ಸಂಪೂರ್ಣ ಬಂದ್ ಮಾಡಲು ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ತೀರ್ಮಾನಿಸಿದರು.
ಪಟ್ಟಣದ ವಿಠ್ಠಲ ಮಂದಿರದಲ್ಲಿ ನಡೆದ ಪಟ್ಟಣದ ಸರ್ವ ಸಮಾಜದ ಗಣ್ಯರ ಹಾಗೂ ವ್ಯಾಪಾರಸ್ಥರ, ಅಸೋಸಿಯೇಷನ್ಗಳ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಅಂದಿನಿಂದಲೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲು ನಿರ್ಣಯಿಸಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಕಾಶಿನಾಥ ಮುರಾಳ, ವಿಜಯಸಿಂಗ್ ಹಜೇರಿ, ರವಿ ಕಟ್ಟಿಮನಿ ಮಾತನಾಡಿ, ‘ಫೆ.25 ರಂದು ಬೆಳಿಗ್ಗೆ 10ಕ್ಕೆ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿಯೇ ಧರಣಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಎಸ್.ಬಿ.ಕಟ್ಟಿಮನಿ, ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಉಪಾಧ್ಯಕ್ಷ ಎಂ.ಕೆ.ಚೋರಗಸ್ತಿ, ಮುತ್ತಪ್ಪ ಚಮಲಾಪುರ, ಮಾಸೂಮಸಾಬ ಕೆಂಭಾವಿ, ಪರಶುರಾಮ ತಂಗಡಗಿ, ವೆಂಕಣ್ಣ ತಾಳಪಲ್ಲೆ, ಎಂ.ಆರ್. ಕತ್ತಿ, ಗಂಗಾಧರ ಕಸ್ತೂರಿ, ಶರಣಗೌಡ ಪಾಟೀಲ, ಪ್ರಕಾಶ ಹಜೇರಿ, ತಿಪ್ಪಣ್ಣ ಸಜ್ಜನ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.