ವಿಜಯಪುರ:ನಗರದ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ಸೌಂದರ್ಯೀಕರಣ ಕಾರ್ಯಗಳಿಗೆ ಬಿಎಲ್ಡಿಇ ಸಂಸ್ಥೆಯ ವಾಸ್ತುಶಿಲ್ಪ ವಿಭಾಗದಿಂದ ತಾಂತ್ರಿಕ ಸಹಯೋಗವನ್ನು ನೀಡಲಾಗುವುದು ಎಂದು ವಿಭಾಗದ ಮುಖ್ಯಸ್ಥರಾದ ಸತೀಶ್ ಎಸ್. ನಡುವಿನಮನಿ ಭರವಸೆ ನೀಡಿದರು.
ನಗರದಬಿಎಲ್ಡಿಇ ಸಂಸ್ಥೆಯ ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ವಿಭಾಗ ಮತ್ತು ಇನ್ಟ್ಯಾಕ್ ಸಹಯೋಗದೊಂದಿಗೆ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ವಿಜಯಪುರ ಪ್ರವಾಸೋದ್ಯಮ: ಸಂಭಾವ್ಯ ಮತ್ತು ಭವಿಷ್ಯ’ ಕುರಿತು ಮಾತನಾಡಿದಅಕ್ಕಮಹಾದೇವಿ ಮಹಿಳಾ ಮಹಿಳಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಓಂಕಾರ ಕಾಕಡೆ, ವಿದ್ಯಾರ್ಥಿಗಳು ಮತ್ತು ಇತರ ಭಾರತೀಯ ಪ್ರವಾಸಿಗರು ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರಿಗಾಗಿ ವಸತಿ ಸೌಕರ್ಯದೊಂದಿಗೆ ಒಂದು ದಿನದ ಸ್ಥಳೀಯ ಪ್ಯಾಕೇಜ್ ಪ್ರವಾಸವನ್ನು ಪ್ರಾರಂಭಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿ, ಪ್ರವಾಸೋದ್ಯಮ ಪುಷ್ಟೀಕರಣಕ್ಕಾಗಿ ವಿಜಯಪುರದ ಸೌಂದರ್ಯವನ್ನು ವರ್ಧಿಸುವ ಅಗತ್ಯ ಇದೆ ಎಂದರು.
ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ನಗರದ ಸೌಂದರ್ಯ ಮತ್ತು ಸ್ವಚ್ಛತೆಯು ಮೊದಲ ಆದ್ಯತೆಯಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಮಲ್ಲಿಕಾರ್ಜುನ ಭಜಂತ್ರಿ,ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಎಎಸ್ಐ ಸಂರಕ್ಷಣಾ ಸಹಾಯಕ ರಾಕೇಶ್ ಬಿ.ಎಸ್.,ಇಂಟ್ಯಾಂಕ್ ಸಂಚಾಲಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಉಪ ಪ್ರಾಚಾರ್ಯ ಡಾ.ಪಿ.ವಿ. ಮಳಜಿ, ವಾಸ್ತುಶಿಲ್ಪ ವಿಭಾಗದ ವಾಸ್ತುಶಿಲ್ಪಿ ಪ್ರೊ. ಆರ್. ಎಸ್. ಜಿರಲಿ, ರವೀಂದ್ರ ಬಿ.ಜಮ್ಮನಕಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.