ADVERTISEMENT

ಜಾತಿ ಆಧಾರದ ಮೇಲೆ ದೇಶ ವಿಭಜನೆ ಅಪಾಯಕಾರಿ: ರಾಯರೆಡ್ಡಿ ಕಳವಳ

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಳವಳ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 14:32 IST
Last Updated 23 ಅಕ್ಟೋಬರ್ 2021, 14:32 IST
ವಿಜಯಪುರದ ಡಾ.ಮಹಾಂತೇಶ ಬಿರಾದಾರ ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿದರು
ವಿಜಯಪುರದ ಡಾ.ಮಹಾಂತೇಶ ಬಿರಾದಾರ ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿದರು   

ವಿಜಯಪುರ: ಜಾತಿ ಆಧಾರದ ಮೇಲೆ ದೇಶ ವಿಭಜನೆಯಾಗುತ್ತಿದ್ದು, ಇದೇ ರೀತಿ ಮುಂದುವರೆದರೆ ಮುಂದಿನ 20-25 ವರ್ಷಗಳ ನಂತರ ಭಾರತದ ಸ್ಥಿತಿ ಗಂಭೀರವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ವಿಜಯಪುರದ ಡಾ.ಮಹಾಂತೇಶ ಬಿರಾದಾರ ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಜಾತಿ, ಉಪಜಾತಿ ಮೂಲಕ ಆಳುವ ಪಕ್ಷಗಳೆ ಜನರನ್ನು ವಿಭಜನೆ ಮಾಡುತ್ತಿದೆ. ಆರಂಭದಲ್ಲಿ ಇದು ನಮಗೆ ಸುಂದರವಾಗಿ ಗೋಚರಿಸಿದರೂ, ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮವನ್ನು ನಾವು ಖಂಡಿತವಾಗಿ ಎದುರಿಸುತ್ತೇವೆ ಎಂದರು.

ಸಿದ್ದರಾಮಯ್ಯ ಮತ್ತು ಎಂ.ಬಿ.ಪಾಟೀಲ ಅವರು ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ಮರುನಾಮಕರಣ ಮಾಡಲು ತಿಳಿಸಿದಾಗ ಮರುವಿಚಾರ ಮಾಡದೆ ನಾಮಕಾರಣ ಮಾಡಿದೆವು. ನಾಮಕರಣ ಮುಖ್ಯವಲ್ಲ. ಆದರೆ ಆ ಶಿವಶರಣೆ ಆದರ್ಶ ಮಹಿಳೆ ವಿಚಾರಗಳು ಸದಾ ನಮ್ಮ ಮಹಿಳೆಯರಿಗೆ ಸ್ಮರಣೆ ಮಾಡುವ ದೃಷ್ಟಿಯಿಂದ ಇದನ್ನು ಮಾಡಲಾಯಿತು ಎಂದರು.

ADVERTISEMENT

ಕಲಬುರ್ಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿವಿ ಎಂದು ಮರುನಾಮಕರಣ ಮಾಡಬೇಕೆಂಬುದು ನನ್ನ ಆಶಯ ಇತ್ತು. ಆದರೆ, ಅನಿವಾರ್ಯಕಾರಣಗಳಿಂದ ಆಗಲಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿಯವರು ಸೇರಿದಂತೆ ಹಲವಾರು ಮಹನೀಯರು ಮಾನವಕುಲಕ್ಕೆ ಮಾಡಿದ ವಿಚಾರಗಳನ್ನು ಮುಂದುವರೆಸುವುದು ಮತ್ತು ಶರಣರ ತತ್ವ, ಆದರ್ಶಗಳನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.

ಎಂ.ಬಿ.ಪಾಟೀಲ್ ಅವರು ವಿಜಯಪುರ ಜಿಲ್ಲೆಯನ್ನು ನಂದವನವನ್ನಾಗಿ ಮಾರ್ಪಡಿಸಿದ್ದಾರೆ. ಕೆರೆ, ಬಾಂದಾರ ಮತ್ತು ಕಾಲುವೆಗಳ ಮೂಲಕ ಜಮೀನುಗಳಿಗೆ ನೀರು ಹರಿಸಿರುವುದರ ಮೂಲಕ ರೈತರಿಗೆ ಒಳ್ಳೆಯದನ್ನೇ ಮಾಡಿದ್ದಾರೆ. ರೈತರ ಪರವಾಗಿ ಅವರು ಸದಾ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಕೆ.ಪಿ.ಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಈ ಭಾಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮಾಡುವ ಒತ್ತಡ ಇತ್ತು. ಸಿದ್ದರಾಮಯ್ಯನವರಿಗೆ ಹೇಳಿ ರಾಜ್ಯ ಸರ್ಕಾರದಿಂದ ಅಧೀಕೃತವಾಗಿ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಲಾಯಿತು ಎಂದರು.

ವಿಜಯಪುರ ಜಿಲ್ಲೆ ಎಂ.ಬಿ.ಪಾಟೀಲರಿಂದ ನೀರಾವರಿ ಯೋಜನೆಗಳು ಯಶಸ್ವಿಯಾಗಿವೆ. ಅದರಂತೆ ರಾಜ್ಯದಲ್ಲಿ ಕೂಡ ಅವರು ಸಚಿವರಾಗಿದ್ದಾಗ ವಿವಿಧ ನೀರಾವರಿ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿದ್ದಾರೆ ಎಂದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ,ವಿಧಾನಪರಿಷತ್ ಸದಸ್ಯ ಸುನೀಲಗೌಡ ಬಿ.ಪಾಟೀಲ್ , ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಪ್ರಶಾಂತ ಹಿರೇದೇಸಾಯಿ ಜೈನಾಪುರ, ಸೋಮನಾಥ ಕಳ್ಳಿಮನಿ, ಈರಣ್ಣ ಕೊಪ್ಪದ, ಡಾ.ಗಂಗಾಧರ ಸಂಬಣ್ಣಿ, ಶಿವಾನಂದ ಹೊನವಾಡ, ಸುರೇಶ ದೇಸಾಯಿ, ಬಸನಗೌಡ ಪಾಟೀಲ ಚಬನೂರ, ವಿಠ್ಠಲ ತುಳಸಿಗೇರಿ,ಡಾ.ಮಹಾಂತೇಶ ಬಿರಾದಾರ ಪ್ರಮುಖರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.