ತಿಕೋಟಾ: ಮುಂಗಾರು ಮಳೆಯ ಕೊರತೆಯ ನಡುವೆಯೂ ತಾಲ್ಲೂಕಿನ ಹಳ್ಳ ಕೊಳ್ಳ, ಕೆರೆಕಟ್ಟೆ ಬಾಂದಾರಗಳು ತುಬಚಿ– ಬಬಲೇಶ್ವರ ಏತ ನೀರಾವರಿ ಯೋಜನೆಯ ಫಲವಾಗಿ ಜಲಪಾತದ ವೈಭವ ಮರುಕಳಿಸಿದೆ.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳಕ್ಕೆ ನಿರ್ಮಿಸಿರುವ ಬಾಂದಾರ ದಾರಿ ಹೋಕರ ಕೈಬಿಸಿ ಕರೆಯುತ್ತಿದೆ.
ಬಾಬಾನಗರ ಗ್ರಾಮದಿಂದ ಬರುವ ಈ ಹಳ್ಳವು ತುಂಬಿ ಹರಿಯುತ್ತಿದೆ. ಅಲ್ಲಲ್ಲಿ ನಿರ್ಮಿಸಿರುವ ಬಾಂದಾರಗಳು ಧುಮಿಕ್ಕಿ ಹರಿಯುತ್ತಿವೆ.
ಈ ಬಾರಿ ಹದ ಮಳೆ ಮಾತ್ರ ಆಗಿದ್ದು, ಬಿತ್ತನೆಯ ನಂತರ ಮಳೆಯೇ ಆಗಿಲ್ಲ. ಸದ್ಯ ಬೆಳೆಗೆ ಮಳೆಯ ಅವಶ್ಯಕತೆ ಇದೆ. ತೊಗರಿ, ಉದ್ದು, ಶೇಂಗಾ ಇತರೆ ಬೆಳೆಗೆ ನೀರಿನ ಕೊರತೆ ಎದುರಾಗಿದೆ.
ಮಳೆಯ ಕೊರತೆಯ ಮಧ್ಯೆಯೂ ಹಳ್ಳ ಕೊಳ್ಳ ತುಂಬಿ ಹರಿಯುತ್ತಿರುವುದರಿಂದ ಕೆಲವು ರೈತರ ತೋಟಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಅನೂಕೂಲವಾಗುತ್ತಿದೆ. ಇನ್ನೂ ಕೆಲವು ಎತ್ತರದ ಪ್ರದೇಶ ಗಡಿ ಭಾಗದ ಗ್ರಾಮದ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅಂತಹ ರೈತರ ತೋಟಗಳಿಗೆ ಈ ಯೋಜನೆಯ ಫಲ ಇನ್ನೂ ದೊರೆತಿಲ್ಲ. ರಾಜ್ಯದ ಕೊನೆಯ ಗ್ರಾಮಕ್ಕೂ ನೀರಾವರಿ ಯೋಜನೆಯ ಅನೂಕೂಲವಾದರೆ ಗಡಿಯುದ್ದಕ್ಕೂ ಇರುವ ಅನ್ನದಾತರ ಖುಷಿ ಇಮ್ಮಡಿಗೊಳ್ಳುತ್ತದೆ.
‘2013 ರಿಂದ 2018ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಸಚಿವರಾಗಿ ಎಂ.ಬಿ.ಪಾಟೀಲರು ಮಾಡಿದ ಸಾವಿರಾರು ಕೋಟಿಯ ನೀರಾವರಿ ಯೋಜನೆಗಳು ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಈ ವರ್ಷ ಮಳೆಯೇ ಇಲ್ಲ. ಆದರೂ ಹಳ್ಳ ಕೊಳ್ಳ ತುಂಬಿ ಹರಿಯುತ್ತಿವೆ ಎಂದರೆ ಸಾಮಾನ್ಯ ಕೆಲಸವಲ್ಲ, ಅವರು ಮಾಡಿದ ನೀರಾವರಿ ಕೆಲಸವು ರೈತರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ’ ಎಂದು ರೈತ ಗುರು ಮಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.