ADVERTISEMENT

ವಿಜಯಪುರ: ಸಹಸ್ರಾರು ಭಕ್ತರಿಂದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ದರ್ಶನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 8:37 IST
Last Updated 4 ಜನವರಿ 2023, 8:37 IST
   

ವಿಜಯಪುರ: ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆದ ಆಶ್ರಮಕ್ಕೆ ಬುಧವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಭೇಟಿ ನೀಡಿ ಚಿತಾಭಸ್ಮದ ದರ್ಶನ ಪಡೆಯುತ್ತಿದ್ದಾರೆ.

ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದವರು, ಪಡೆಯಲಾಗದವರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಶ್ರಮಕ್ಕೆ ಬಂದು ಸರದಿಯಲ್ಲಿ ನಿಂತು ಚಿತಾಭಸ್ಮಕ್ಕೆ ಕೈಮುಗಿದು, ಕಂಬನಿ ಮಿಡಿಯುತ್ತಿದ್ದಾರೆ.

ಆಶ್ರಮದ ಗಿಡಮರಗಳ ಕೆಳಗೆ ಕುಳಿತು ಸಿದ್ದೇಶ್ವರ ಶ್ರೀಗಳ ಗುಣಗಾನ, ಭಜನೆ ಮಾಡುತ್ತಿದ್ದಾರೆ.

ಶ್ರೀಗಳು ದೈಹಿಕವಾಗಿ ನಮ್ಮ ನಡುವೆ ಇಲ್ಲವಾದರೂ, ಅವರ ಪ್ರವಚನಗಳು, ನೀತಿ ಬೋಧನೆಗಳು, ವಿಚಾರಗಳು ನಮ್ಮಲ್ಲಿ ನಿರಂತರವಾಗಿರುತ್ತದೆ ಎಂದರು.

ಐದು ಕಡೆ ವಿಸರ್ಜನೆ: ಸಿದ್ದೇಶ್ವರ ಶ್ರೀಗಳ ಕೋರಿಕೆಯಂತೆ ಅವರ ಚಿತಾಭಸ್ಮವನ್ನು ನಾಲ್ಕು ನದಿ, ಒಂದು ಸಾಗರ ಸೇರಿದಂತೆ ಐದು ಕಡೆ ಒಂದರಡು ದಿನಗಳಲ್ಲಿ ವಿಸರ್ಜಿಸಲಾಗುವುದು ಎಂದು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಾರ್ವಜನಿಕರಿಗೆ ಶ್ರೀಗಳ ಚಿತಾಭಸ್ಮ ನೀಡಲಾಗುವುದು ಎಂದು ಅಂತ್ಯಕ್ರಿಯೆ ವೇಳೆ ತಿಳಿಸಲಾಗಿತ್ತು. ಆದರೆ, ಈಗ ನೀಡದಿರಲು ನಿರ್ಧರಿಸಲಾಗಿದೆ ಎಂದರು.

ಶ್ರೀಗಳ ಬಗ್ಗೆ ಗೌರವ ಇರುವವರು ಬೇಕಾದರೆ ಆಶ್ರಮದ ಜ್ಞಾನ ಭಂಡಾರದಲ್ಲಿ ಸಿಗುವ ಗ್ರಂಥಗಳನ್ನು, ವಿಭೂತಿಯನ್ನು ಕೊಂಡೊಯ್ಯಲಿ ಎಂದರು.

ಬಿಎಲ್ ಡಿಇ ಸಂಸ್ಥೆ ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಆಶ್ರಮದಲ್ಲಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ನಿತ್ಯ ದಾಸೋಹ, ಪ್ರವಚನಗಳು ಮುಂದುವರಿಸಿಕೊಂಡು ಹೋಗಬೇಕು ಎಂಬ ಆಶಯ ಇದೆ ಎಂದು ಹೇಳಿದರು.

ಮುಂದಿನ ರೂಪುರೇಷೆ ಕುರಿತು, ಮಠಾಧೀಶರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಮಾತನಾಡಿ, ಶ್ರೀಗಳ ಅಂತಿಮ ಸಂಸ್ಕಾರದ ವೇಳೆ ಯಾವುದೇ ಅಹಿತಕರಕ್ಕೆ ಆಸ್ಪದ ನೀಡದೇ ಶಾಂತಿಯುತವಾಗಿ ನಡೆಸಿಕೊಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.