ಬಂಧನ
(ಪ್ರಾತಿನಿಧಿಕ ಚಿತ್ರ)
ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಗ್ರಾಮವೊಂದರ ಪರಿಶಿಷ್ಟ ಜಾತಿಯ ಬಾಲಕಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
‘ಪ್ರೀತಿಸುವುದಾಗಿ ಮೂರು ತಿಂಗಳಿನಿಂದ ಮಾಳಿಂಗರಾಯ ದಂಡೋಜಿ ಎಂಬಾತ ಪೀಡಿಸುತ್ತಿದ್ದ. ಮಗಳಿಗೆ ಬೇರೊಬ್ಬರ ಜೊತೆ ಮದುವೆಗೆ ಮಾತುಕತೆ ನಡೆಸಿದ್ದೆವು. ಇದನ್ನು ತಿಳಿದು ಆರೋಪಿ ನನ್ನನ್ನೇ ಮದುವೆ ಆಗಬೇಕು ಎಂದು ಮಗಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ. ಬೇಸತ್ತ ಮಗಳು ಮಂಗಳವಾರ ನೇಣುಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.
‘ಆರೋಪಿ ಮಾಳಿಂಗರಾಯ ದಂಡೋಜಿ ಮತ್ತು ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಆತನ ಸ್ನೇಹಿತ ಶಿವನಗೌಡ ಬಿರಾದಾರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು, ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಶವ ಇಟ್ಟು ಪ್ರತಿಭಟನೆ:
‘ಅತ್ಯಾಚಾರ ಮಾಡಿ ಬಾಲಕಿ ಕೊಲೆ ಮಾಡಲಾಗಿದೆ. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು’ ಎಂದು ದಲಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಪರಿಹಾರ ವಿತರಣೆ:
ಜಿಲ್ಲಾಡಳಿತವು ಸಂತ್ರಸ್ತೆ ಕುಟುಂಬಕ್ಕೆ ದೌರ್ಜನ್ಯ ತಡೆ ಕಾಯ್ದೆಯಡಿ ₹ 8.25 ಲಕ್ಷ ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ₹4,12,500 ಚೆಕ್ ಅನ್ನು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೊದ್ದಾರ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.