ADVERTISEMENT

ವಸತಿ ಗೃಹದಲ್ಲಿ ಇಬ್ಬರ ಕೊಲೆ; ಕಾಲುವೆಗೆ ಬಿದ್ದು ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 14:53 IST
Last Updated 24 ಮಾರ್ಚ್ 2023, 14:53 IST
   

ವಿಜಯಪುರ: ವಿಜಯಪುರ ನಗರ ಮತ್ತು ಇಂಡಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.

ಕತ್ತು ಸೀಳಿ ಕೊಲೆ:

ವಿಜಯಪುರ ನಗರದ ‘ರಾಜಧಾನಿ’ ಡಿಲೆಕ್ಸ್‌ ಲಾಡ್ಜ್‌ನ ಕೊಠಡಿ ಸಂಖ್ಯೆ 114 ರಲ್ಲಿ ಇಬ್ಬರು ಯುವಕರ ಮೃತ ದೇಹ ಪತ್ತೆಯಾಗಿದೆ.

ADVERTISEMENT

ಇಂದ್ರಕುಮಾರ್‌ ಎಂಬುವವರ ಗುರುತು ಪತ್ತೆಯಾಗಿದೆ. ಈತ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಶ್ರೀಕಂಠಪುರ ತಾಂಡದ ಒಬ್ಬ ವ್ಯಕ್ತಿ ಎಂದು ತಿಳಿದುಬಂದಿದೆ. ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಇವರಿಗೆ ಸಂಬಂಧಿಸಿದ ಬೈಕ್‌ ಒಂದು ಪತ್ತೆಯಾಗಿದೆ. ಈ ಬೈಕ್‌ ಅರಕೇರಿ ತಾಂಡಾದ ವ್ಯಕ್ತಿಯೊಬ್ಬರಿಗೆ ಸೇರಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಎರಡು ದಿನಗಳಿಂದ ಲಾಡ್ಜ್‌ನಲ್ಲಿ ಇಬ್ಬರು ಯುವಕರು ಇದ್ದರು. ಬಾಗಿಲು ತೆಗೆಯದೇ ಇದ್ದಾಗ ಮತ್ತು ಕೊಠಡಿ ಒಳಗಿನಿಂದ ಕೆಟ್ಟ ವಾಸನೆ ಬಂದಾಗ ಅನುಮಾನಗೊಂಡ ಲಾಡ್ಜ್‌ ಸಿಬ್ಬಂದಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದಾಗ ಬಂದು ಬಾಗಿಲು ತೆಗೆದಾಗ ಇಬ್ಬರ ಶವ ಪತ್ತೆಯಾಗಿದೆ ಎಂದರು.

‘ಒಬ್ಬನ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ಇನ್ನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಸಂಬಂಧ ಗಾಂಧಿ ಚೌಕಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ’ ಎಂದರು.

ಕಾಲುವೆಗೆ ಬಿದ್ದು ಸಾವು:

ಇಂಡಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕೆನಾಲ್‌ನಲ್ಲಿ ಮೋಟಾರ್ ರಿಪೇರಿ ಮಾಡುವ ವೇಳೆ ಕಾಲು ಜಾರಿ ಬಿದ್ದು ಇಬ್ಬರು ಸಾವಿಗೀಡಾಗಿದ್ದಾರೆ.

ಭೋಜರಾಜ್ ದಶವಂತ (66) ಹಾಗೂ ರಾಜಕುಮಾರ ಶೆಟ್ಟಪ್ಪ ದಶವಂತ (26) ಸಾವಿಗೀಡಾಗಿರುವವರು ಎಂದು ಗುರುತಿಸಲಾಗಿದೆ.

ಇಬ್ಬರು ಕಾಲುವೆಗೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾ ಅಧಿಕಾರಿಯಾದ ಗುರುಪಾದಪ್ಪ ತೇಲಿ ಅವರ ತಂಡ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ಹೊರ ತೆಗೆದರು. ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.