ADVERTISEMENT

ಯುಕೆಪಿ ಹಂತ-3 ಅನುಷ್ಠಾನಕ್ಕೆ ಭೂಸ್ವಾಧೀನ: ಐ ತೀರ್ಪಿಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:46 IST
Last Updated 17 ಸೆಪ್ಟೆಂಬರ್ 2025, 5:46 IST
ಆಲಮಟ್ಟಿ ಜಲಾಶಯದ ಒಂದು ನೋಟ
ಆಲಮಟ್ಟಿ ಜಲಾಶಯದ ಒಂದು ನೋಟ   

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನಕ್ಕೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸಚಿವ ಸಂಪುಟ ಮಂಗಳವಾರ ಒಪ್ಪಂದದ ಐತೀರ್ಪಿನ ಪ್ರಕಾರ (ಕನ್ಸೆಂಟ್ ಅವಾರ್ಡ್) ಪರಿಹಾರ ಪ್ರಕಟಿಸಿದ್ದು, ರೈತರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಲಮಟ್ಟಿ ಜಲಾಶಯ 519.6 ಮೀ. ದಿಂದ 524.256 ಮೀ. ಎತ್ತರವರೆಗೆ ಏರಿಸಿದಾಗ 75,563 ಎಕರೆ ಪ್ರದೇಶ ಜಲಾವೃತಗೊಳ್ಳುತ್ತದೆ. ಸಂಗ್ರಹಗೊಳ್ಳುವ 130 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಬಳಕೆಗಾಗಿ ಕಾಲುವೆಗಳ ಜಾಲ ನಿರ್ಮಾಣಕ್ಕಾಗಿ 51,847 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಬೇಕಿದೆ.

ಕನ್ಸೆಂಟ್ ಅವಾರ್ಡ್: 

ADVERTISEMENT

ಒಪ್ಪಂದದ ಐತೀರ್ಪು (ಕನ್ಸೆಂಟ್ ಅವಾರ್ಡ್)ಗೆ ಒಲುವು ತೋರಿ ಜಲಾವೃತಗೊಳ್ಳುವ ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ, ಖುಷ್ಕಿ ಜಮೀನಿಗೆ ₹30 ಲಕ್ಷ ನಿಗದಿಗೊಳಿಸಿದೆ. ಕಾಲುವೆಗಳ ನಿರ್ಮಾಣಕ್ಕೆ ವಶಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಗೆ ₹30 ಲಕ್ಷ, ಖುಷ್ಕಿ ಜಮೀನಿಗೆ ₹25 ಲಕ್ಷ ನಿಗದಿಪಡಿಸಿದ್ದಾರೆ. ಇದಕ್ಕಾಗಿ ಕೃಷ್ಣಾ ತೀರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ಸೆಂಟ್ ಅವಾರ್ಡ್ ಉತ್ತಮ:

ಸರ್ಕಾರ ಈಗ ನಿಗದಿಪಡಿಸಿರುವ ಬೆಲೆ ಮಾರುಕಟ್ಟೆಯ ದರಕ್ಕೆ ಸ್ಪರ್ಧಾತ್ಮಕವಾಗಿಯೇ ಇದೆ ಎಂದು ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಚಾಲಕ ಜಿ.ಸಿ. ಮುತ್ತಲದಿನ್ನಿ ಅಭಿಪ್ರಾಯಪಟ್ಟರು.

ಯುಕೆಪಿ ಹಂತ-1 ಮತ್ತು ಹಂತ-2 ರ ಅನುಷ್ಠಾನಕ್ಕಾಗಿ ವಶಪಡಿಸಿಕೊಂಡ ಬಹುತೇಕ ಜಮೀನಿಗೆ ಕನ್ಸೆಂಟ್ ಅವಾರ್ಡ್ ದಲ್ಲಿಯೆ ಪರಿಹಾರ ನೀಡಲಾಗಿದೆ. ಇದರಿಂದ ಯುಕೆಪಿ ಯೋಜನೆ ತ್ವರಿತ ಅನುಷ್ಠಾನಗೊಂಡಿತು. ಹೆಚ್ಚಿನ ಪರಿಹಾರಕ್ಕೆ ಕೋರ್ಟ್‌ಗೆ ಮೊರೆ ಹೋದಾಗ ಯೋಜನೆ ವಿಳಂಬವಾಗಲಿದೆ. ಮೂರು ವರ್ಷದ ಕಾಲಮಿತಿ ನಿಗದಿಗೊಳಿಸಿದ್ದು, ಅದಕ್ಕೆ ತಕ್ಕಂತೆ ಸರ್ಕಾರ ನಡೆದುಕೊಳ್ಳಬೇಕಿದೆ ಎಂದರು.

‘ಸರ್ಕಾರ ನಿಗದಿಪಡಿಸಿರುವ ಬೆಲೆ ಬಹುತೇಕ ಒಪ್ಪಿಗೆಯಿದೆ. ಇದರ ಜತೆ ಹೊಲದಲ್ಲಿನ ಗಿಡಗಳಿಗೂ ದರ ನಿಗದಿಯಾಗಿ ಹೆಚ್ಚಿನ ಪರಿಹಾರ ದೊರೆಯುತ್ತದೆ. ಜನರಲ್ ಅವಾರ್ಡ್ ಮಾಡಿ, ಕಡಿಮೆ ಪರಿಹಾರ ಪಡೆದು, ನಂತರ ಕೋರ್ಟ್‌ಗೆ ಹೋಗಿ ಹೆಚ್ಚಿನ ಪರಿಹಾರ ಪಡೆಯಲು ವಿಳಂಬವಾಗುತ್ತದೆ’ ಎಂದು ಕೊಲ್ಹಾರದ ರೈತ ಎಂ.ಎಸ್. ಏಳಂಗಡಿ, ಡೋಂಗ್ರಿಸಾಬ್ ಗಿರಿಗಾವಿ, ಅಶೋಕ ಗಿಡ್ಡಪ್ಪಗೋಳ ಅಭಿಪ್ರಾಯಪಟ್ಟರು.

ಕಾಲುವೆಗೆ ಬೆಲೆ ನಿಗದಿ; ಅಸಮಾಧಾನ:

‘ಯುಕೆಪಿ ಯೋಜನೆ ಒಂದೇ, ಅದು ಜಲಾವೃತಗೊಳ್ಳಲಿ ಇಲ್ಲವೇ ಕಾಲುವೆಗಾದರೂ ವಶಪಡಿಸಿಕೊಳ್ಳಲಿ, ಒಂದೇ ದರ ನಿಗದಿಗೊಳಿಸಬೇಕಿತ್ತು. ಕಾಲುವೆಗೆ ಸದ್ಯ ನಿಗದಿಗೊಳಿಸಿರುವ ಬೆಲೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ’ ಎಂದು ಕಾಲುವೆಯಿಂದ ಬಾಧಿತಗೊಂಡಿರುವ ರೈತರಾದ ಶಂಕರ ಜಲ್ಲಿ, ಆರ್.ಎಸ್. ಉಕ್ಕಲಿ, ಮಲ್ಲಪ್ಪ ಅಂಕದ, ಆನಂದ ಬೊಮ್ಮಣಗಿ ಹೇಳಿದರು.

ಮೇಲ್ಮನವಿಗೆ ಅವಕಾಶ: 

ಜನರಲ್ ಅವಾರ್ಡ್‌ನಲ್ಲಿ ನಿಗದಿಗೊಳಿಸಿರುವ ಪರಿಹಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕೋರ್ಟ್‌ಗೆ ಹೋಗುವ ಪೂರ್ವದಲ್ಲಿ ಭೂಸ್ವಾಧೀನ ಪ್ರಾಧಿಕಾರ ರಚನೆಗೆ ಮಾಡಿ, ಅದಕ್ಕೆ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿದೆ. ಪ್ರಾಧಿಕಾರಕ್ಕೆ ಭೂಸ್ವಾಧೀನದ ವ್ಯಾಜ್ಯಗಳು ಮಾತ್ರ ಬರಲಿದ್ದು, ಇದರಿಂದ ತ್ವರಿತ ಪರಿಹಾರಕ್ಕೆ ಅನುಕೂಲವಾಗಲಿದೆ. ಇಲ್ಲಿಯವರೆಗೆ 25,000 ಕ್ಕೂ ಅಧಿಕ ರೈತರು ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿ, ವಿಜಯಪುರ, ಬಾಗಲಕೋಟೆ, ಜಮಖಂಡಿ, ಕೊಪ್ಪಳ, ಯಾದಗೀರ ಜಿಲ್ಲಾ ಕೋರ್ಟ್ ಗೆ ಮೊರೆ ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಒಟ್ಟಾರೆ ರಾಜ್ಯ ಸಚಿವ ಸಂಪುಟ ಮಂಗಳವಾರ ಕೈಗೊಂಡ ನಿರ್ಧಾರದಿಂದ ಯುಕೆಪಿ ಅನುಷ್ಠಾನ ಚುರುಕು ಪಡೆಯಲಿದೆ. ಸರ್ಕಾರ ಪುನರ್ವಸತಿ, ಪುನರ್ ನಿರ್ಮಾಣದ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.