ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತಿಹಾಳ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 29 ಕುರಿಗಳು ಸ್ಥಳದಲ್ಲೇ ಸಾವಿಗೀಡಾಗಿವೆ.
ಭಾನುವಾರ ತಡರಾತ್ರಿ ಫತ್ತೇಪೂರ ಗ್ರಾಮದ ಹಳ್ಯಪ್ಪ ಎಂಬ ಕುರಿಗಾಯಿ ಇಬ್ಬರು ಮಕ್ಕಳೊಂದಿಗೆ ಕುರಿಗಳನ್ನು ಹೊಡೆದುಕೊಂಡು ಯರಗಲ್ಲ ಗ್ರಾಮದಿಂದ ಫತ್ತೇಪೂರ ಗ್ರಾಮಕ್ಕೆ ತೆರಳುತ್ತಿದ್ದರು. ಮಧ್ಯರಾತ್ರಿ 2 ಗಂಟೆಗೆ ಬಸ್ತಿಹಾಳ ಕ್ರಾಸ್ ಹತ್ತಿರ ವೇಗವಾಗಿ ಬಂದ, ಕೋಳಿ ಸಾಗಿಸುತ್ತಿದ್ದ ವಾಹನವೊಂದು ಡಿಕ್ಕಿ ಹೊಡೆದಿದೆ. ವೇಗವಾಗಿ ಬರುತ್ತಿದ್ದ ವಾಹನ ತಮ್ಮ ಜೀವಕ್ಕೂ ಅಪಾಯ ತಂದೊಡ್ಡುವ ಸೂಚನೆ ಅರಿತ ಕುರಿಗಾರು ಕುರಿಗಾಯಿಗಳನ್ನು ರಸ್ತೆ ಬದಿಗೆ ಸರಿಸಲು ಮುಂದಾಗುವ ವೇಳೆಗಾಗಲೇ ವಾಹನ ಕುರಿಗಳ ಮೇಲೆ ಹರಿದುಹೋಗಿತ್ತು. ಘಟನೆ ಬಳಿಕ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಕಲಕೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.