
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಬಂಧಿಸಿ, ಅವರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಕೇಸು ದಾಖಿಸಿ ಜೈಲಿಗೆ ಕಳುಹಿಸಿರುವ ಹಾಗೂ ಹೋರಾಟಗಾರರ ಟೆಂಟ್ ಅನ್ನು ರಾತ್ರೋರಾತ್ರಿ ತೆರವುಗೊಳಿಸಿರುವ ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ವಿಜಯಪುರ ಬಂದ್ ಎಚ್ಚರಿಕೆ: ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟದಲ್ಲಿ ತೊಡಗಿದ್ದ ಸಂಗನಬಸವ ಸ್ವಾಮೀಜಿ ಸೇರಿದಂತೆ ಇನ್ನುಳಿದ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲವಾದರೆ ವಿಜಯಪುರ ಬಂದ್ ಗೆ ಕರೆ ನೀಡಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದೂ ಸ್ವಾಮೀಜಿಗಳ ಮೇಲೆ ದೊಡ್ಡ ಷಡ್ಯಂತ್ರ ಮಾಡುತ್ತಿದೆ, ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಈ ರೀತಿ ಹಿಂಸೆ ನೀಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ವಿಜಯಪುರಕ್ಕೆ ಬರುವ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ, ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಸಿ.ಎಂ. ಉದ್ಘಾಟಿಸುವುದು ಬೇಡ ಎಂದು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದಾರೆ, ಈಗ ಪಿಪಿಪಿ ಹೋರಾಟಗಾರರಿಂದ ಮುಖ್ಯಮಂತ್ರಿಗಳಿಗೆ ವಿರೋಧ ವ್ಯಕ್ತವಾಗುವ ದೃಷ್ಟಿಯಿಂದ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆದಿದೆ ಎಂದು ಆರೋಪಿಸಿದರು.
ಸುಳ್ಳು ಕೇಸು ಕೈಬಿಡಿ: ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ರಾತ್ರೋರಾತ್ರಿ ಟೆಂಟ್ ತೆಗೆದಿರುವುದು ಎಷ್ಟು ಸರಿ? ಬಂಧಿತ ಹೋರಾಟಗಾರರ ಮೇಲೆ ಕೊಲೆ ಪ್ರಯತ್ನ, ಅಪರಾಧ ಒಳಸಂಚು ಮೊದಲಾದ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಎಫ್ಐಆರ್ ಕೂಡಲೇ ರದ್ದುಗೊಳಿಸಬೇಕು, ಕೂಡಲೇ ಸ್ವಾಮೀಜಿಗಳ ಕ್ಷಮೆ ಕೋರಿ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಿಡುಗಡೆಗೊಳಿಸಿ: ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಶಾಂತಿಯುತವಾಗಿ ಹೋರಾಟ ಕೈಗೊಂಡಿದ್ದವರ ಮೇಲೆ ಸಚಿವ ಎಂ.ಬಿ.ಪಾಟೀಲರ ಕುಮ್ಮಕ್ಕಿನಿಂದ ದೌರ್ಜನ್ಯ ಎಸಗಿದ ಪೊಲೀಸ್ರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರೈತ ಭಾರತ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲು ವಿಫಲರಾಗಿರುವ ಸಚಿವ ಎಂ.ಬಿ.ಪಾಟೀಲ ಪೊಲೀಸರನ್ನು ಬಳಿಸಿಕೊಂಡು ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದರು.
ಹೋರಾಟಗಾರರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ರಾಜಕಾರಣಗಳೊಂದಿಗೆ ಶಾಮೀಲಾಗಿ ಇಲಾಖೆಗೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೋರಾಟಗಾರರ ಸ್ಟೇಜ್ ಕಿತ್ತಿಸಿರುವುದು ಖಂಡನೀಯ. ಜನಪರ ಹೋರಾಟ ಹತ್ತಿಕ್ಕಬಾರದು ಹೋರಾಗಾರರು ಸಹನೆಯಿಂದ ಕಾಯಬೇಕು ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲೇಬೇಕು-ಪ್ರೊ.ರಾಜು ಆಲಗೂರ, ಮಾಜಿ ಶಾಸಕ
ಕಾವಿಗಳ ಮೇಲೆ ಕೈ ಹಾಕಿ ದಬ್ಬಾಳಿಕೆಯಿಂದ ನಡೆದುಕೊಳ್ಳುವುದು ಖಂಡನೀಯ. ಜನಪರವಾದ ಹೋರಾಟಗಾರರ ಮೇಲೆ ಹಾಕಿರುವ ಕೇಸು ವಾಪಸ್ ಪಡೆಯಬೇಕು–ಅರುಣ ಶಹಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ
ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟಗಾರರು ಗೂಂಡಾಗಳಲ್ಲ ಸುಳ್ಳು ಕೇಸ್ ದಾಖಲಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ-ಗುರುಲಿಂಗಪ್ಪ ಅಂಗಡಿ,ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ ವಿಜಯಪುರ
ಪೊಲೀಸರು ಸಾರ್ವಜನಿಕರ ಸೇವಕರು ಎಂಬುದನ್ನು ಮರೆಯಬಾರದು ಯಾರದ್ದೋ ಸೇವಕರಾಗಬಾರದು. ಬಿಜೆಪಿಯಿಂದ ಟೆಂಟ್ ಹಾಕಿ ಪ್ರತಿಭಟನೆ ನಡೆಸಬೇಕಾದೀತು–ಉಮೇಶ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿಬಿಜೆಪಿ ಎಸ್.ಸಿ. ಮೋರ್ಚಾ
‘ಸಚಿವರನ್ನು ತಪ್ಪಿತಸ್ಥರನ್ನಾಗಿಸಲು ಹುನ್ನಾರ’
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗದೇ ಇರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಹೊಣೆಗಾರರನ್ನಾಗಿಸಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ.9ರ ಒಳಗಡೆ ಮುಖ್ಯಮಂತ್ರಿ ಬಳಿ ನಿಯೋಗ ಕರೆದುಕೊಂಡು ಹೋಗಿ ಒತ್ತಾಯ ಮಾಡುವುದಾಗಿ ಸಚಿವ ಎಂ.ಬಿ.ಪಾಟೀಲರು ಹೇಳಿದ್ದರು. ಈ ನಡುವೆ ಹೋರಾಟಗಾರರು ಸಚಿವರು ಮನೆಗೆಯಲ್ಲಿ ಇರದೇ ಇರುವಾಗ ಮುತ್ತಿಗೆ ಹಾಕಿ ಮುಜುಗರ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.
ಚಳವಳಿ ಮಾಡುವುದು ತಪ್ಪಲ್ಲ. ಆದರೆ ಯಶಸ್ವಿಯಾಗಲು ಹೋರಾಟ ಕ್ರಮಬದ್ಧವಾಗಿರಬೇಕು ಎಂದರು. ಸ್ವಾಮೀಜಿಯವರು ಹಲ್ಲೆ ಮಾಡಿದರೂ ನಡೆಯುತ್ತದೆ ಎಂಬುದು ಸರಿಯಲ್ಲ. ಅವರ ಹಿಂದೆ ಯಾರಿದ್ದಾರೋ ತಿಳಿಯದು. ಪಿಎಸ್ಐಗೆ ಕಪಾಳಮೋಕ್ಷ ಮಾಡಿರುವುದು ಸರಿಯಲ್ಲ. ಸ್ವಾಮೀಜಿ ಅವರನ್ನು ಬಿಟ್ಟು ನಿರಾಪರಾಧಿ ಹೋರಾಟಗಾರರನ್ನು ಕೈಬಿಡಬೇಕು ದೂರು ಹಿಂಪಡೆಯಬೇಕು ಎಂದು ಪೊಲೀಸರಿಗೆ ಆಗ್ರಹಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ನಡೆಯುತ್ತಿರುವ ಹೋರಾಟ ಯಶಸ್ವಿಯಾಗಬೇಕು ಸರ್ಕಾರಕ್ಕೆ ಆರ್ಥಿಕ ಬಾರ ಆದರೂ ಕೂಡ ವಿಶೇಷ ಪ್ರಕರಣವಾಗಿ ಪರಿಗಣಿಸಿ ಸರ್ಕಾರಿ ಕಾಲೇಜು ಮಂಜೂರು ಮಾಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದರು. ಮುಖಂಡರಾದ ಚಂದ್ರಶೇಖರ ಕೊಡಬಾಗಿ ಸುನೀಲ್ ಉಕ್ಕಲಿ ಗಂಗಾಧರ ಸಂಬಣ್ಣಿ ಹರೀಶ ಕವಲಗಿ ವಸಂತ ಹೊನಮೋಡೆ ಇದ್ದರು.
‘ಸ್ವಾಮೀಜಿ ಜೊತೆ ಪೊಲೀಸರ ವರ್ತನೆ ಖಂಡನಾರ್ಹ’
ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನಾಕಾರರು ಧರಣಿಗೆ ಮುಂದಾದ ಸಂದರ್ಭಲ್ಲಿ ಹುಣಿಶ್ಯಾಳದ ಸಂಗನಬಸವ ಸ್ವಾಮೀಜಿ ಅವರ ಮೈಮೇಲಿನ ಬಟ್ಟೆ ಹಿಡಿದು ಎಳೆದೊಯ್ಯಲು ಯತ್ನಿಸಿದ್ದು ಪೊಲೀಸರ ಅತಿರೇಕದ ವರ್ತನೆ ಎಂದು ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಖಂಡಿಸಿದ್ದಾರೆ.
ಸ್ವಾಮೀಜಿ ಹಾಗೂ ಹೋರಾಟಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ನ್ಯಾಯಸಮ್ಮತವಲ್ಲ. ಪ್ರತಿಭಟನೆ ಜನರ ಮೂಲಭೂತ ಹಕ್ಕು. ಈ ಹೋರಾಟಗಾರರು ಆಸ್ತಿ ನಷ್ಟಮಾಡಿ ಬೆಂಕಿ ಹಚ್ಚಿ ಕಲ್ಲು ತೂರಿ ಪ್ರತಿಭಟನೆ ಮಾಡುತ್ತಿರಲಿಲ್ಲ ಇಂಥಹ ಸಂದರ್ಭದಲ್ಲಿ ಜಿಲ್ಲಾ ಪೊಲೀಸರು ತೀವ್ರ ಕ್ರಮಕ್ಕೆ ಮುಂದಾಗಿರುವುದು ಖಂಡನಾರ್ಹ ಎಂದಿದ್ದಾರೆ.
ಈ ಅಚಾತುರ್ಯ ಘಟನೆಗೆ ಕಾರಣರಾದ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಹಠ ಬಿಟ್ಟು ಪ್ರತಿಭಟನಾಕಾರರ ಜೊತೆ ಮಾತನಾಡಿ ಅವರು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಂಡಿತ ಮಾಡುವೆ ಎಂದು ನೀಡಿರುವ ಆಶ್ವಾಸನೆಯನ್ನು ಪುನರುಚ್ಚರಿಸಿ ಪರಿಸ್ಥಿತಿ ಶಾಂತಗೊಳಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಐಯುಟಿಯುಸಿ ಖಂಡನೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸಲು ಮುಂದಾದ ಹೋರಾಟಗಾರರನ್ನು ಬಂಧಿಸಿ ಸುಳ್ಳು ಮೊಕದ್ದಮೆ ದಾಖಲಿಸಿರುವ ಕ್ರಮವನ್ನು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಖಂಡಿಸಿದ್ದಾರೆ. ಜನಪರ ಹೋರಾಟದ ಸಂದರ್ಭದಲ್ಲಿ ನಡೆದ ಈ ಅನುಚಿತ ಘಟನೆಯನ್ನು ಮಾತುಕತೆ ಮೂಲಕ ಪರಿಹರಿಸುವ ಬದಲು ಕೊಲೆಯತ್ನ ಕೊಲೆ ಬೆದರಿಕೆ ಅಕ್ರಮಕೂಟ ಮುಂತಾದ ಕರಾಳ ಸೆಕ್ಷನ್ಗಳನ್ನು ಸ್ವಾಮೀಜಿ ಜೊತೆಗೆ ಹೆಣ್ಣು ಮಕ್ಕಳನ್ನೂ ಸೇರಿಸಿ ಇತರ ಹೋರಾಟಗಾರರ ಮೇಲೂ ಹಾಕಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಜನಪರ ಹೋರಾಟವನ್ನು ಹತ್ತಿಕ್ಕುವ ಪಿತೂರಿಯಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ. ಈ ಸುಳ್ಳು ಕೇಸುಗಳನ್ನು ರದ್ದುಪಡಿಸಿ ಬಂಧಿಸಿರುವ 6 ಮಂದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಈಡೇರಿಸಬೇಕೆಯನ್ನು ಈಡೇರಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.