ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕ್ರಿಸ್ಮಸ್ ಹಬ್ಬವನ್ನು ಶನಿವಾರ ಕ್ರೈಸ್ತರು ಸಡಗರ ಸಂಭ್ರಮದಿಂದ ಆಚರಿಸಿದರು. ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಚರ್ಚ್ಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಬ್ಬದ ಪ್ರಯುಕ್ತ ಚರ್ಚ್ಗಳನ್ನು ವಿಶೇಷವಾಗಿ ದೀಪಾಲಂಕಾರ ಮಾಡಲಾಗಿತ್ತು. ಚರ್ಚ್ನ ಹೊರ ಆವರಣವು ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತಿತ್ತು. ಏಸು ಕ್ರಿಸ್ತನ ಜನನವನ್ನು ಸಾರುವ ಗೋದಲಿಗಳನ್ನು ಸಿದ್ಧಪಡಿಸಿ, ಅಲಂಕರಿಸಲಾಗಿತ್ತು. ಸಾಂತಾ ಕ್ಲಾಸ್ ವೇಷಧಾರಿಗಳು ಗಮನ ಸೆಳೆದರು.
ಹೊಸ ಉಡುಪುಗಳನ್ನು ಧರಿಸಿ ಚರ್ಚ್ಗಳಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್ಮಸ್ನ ಹರ್ಷಗೀತೆಗಳು (ಕ್ಯಾರಲ್ಸ್) ಅನುರಣಿಸಿದವು. ಬೈಬಲ್ ಸಂದೇಶ ಪಠಿಸಲಾಯಿತು. ಕೋವಿಡ್ ನಿರ್ಮೂಲನೆಗಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಗುರುಗಳು ಏಸುವಿನ ಇತಿಹಾಸವನ್ನು ಪರಿಚಯಿಸಿದರು. ಪರಸ್ಪರಶುಭಾಶಯ ವಿನಿಮಯ ಮಾಡಿಕೊಂಡರು.
ವಿಜಯಪುರ ನಗರದ ಸಿಎಸ್ಐ ಚರ್ಚ್ ಮತ್ತು ಸಂತ ಅನ್ಸಿಸ್ ಚರ್ಚ್ಗಳಲ್ಲಿ ಸಂಭ್ರಮ ನೆಲೆಸಿತ್ತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯುವಕ–ಯುವತಿಯರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿ, ಕೇಕ್ಗಳನ್ನು ಹಂಚಿ, ತಿನ್ನುವ ಮೂಲಕ ಸೌಹಾರ್ದದ ಸಂಕೇತ ಸಾರಿದರು. ತಮ್ಮ ನೆರೆಹೊರೆಯ ಹಾಗೂ ಇತರ ಧರ್ಮೀಯರಿಗೆ ಕೇಕ್ ವಿತರಿಸಿ ಸಂಭ್ರಮಿಸಿದರು. ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೋವಿಡ್ ಕಾರಣ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.