ವಿಜಯಪುರ: ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ, ಮಾರುಕಟ್ಟೆಯ ಕೊರತೆ, ಕೋಲ್ಡ್ ಸ್ಟೋರೆಜ್ ಕೊರತೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖರ್ಚು, ಕೂಲಿಯವರ ಪಗಾರ, ಔಷಧ, ಗೊಬ್ಬರ ಇನ್ನಿತರ ಖರ್ಚು ಹೆಚ್ಚಾಗಿದೆ ಎಂದರು.
ಬೇಡಿಕೆಗಳು
2024-25 ನೇ ಸಾಲಿನ ದ್ರಾಕ್ಷಿ ಬೆಳೆ ವಿಮೆ ಅವಧಿ ಮುಗಿದರೂ ಇನ್ನುವರೆಗೂ ವಿಮೆ ಹಣ ಜಮಾ ಮಾಡಿಲ್ಲ, ಬೇಗ ವಿಮೆ ಹಣ ಜಮಾ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ದ್ರಾಕ್ಷಿಗೆ ಸಂಬಂಧಿಸಿದ ವಿಮೆ ಕಂಪನಿಯ ಕಚೇರಿಯನ್ನು ವಿಜಯಪುರದಲ್ಲಿ ತೆರೆಯಬೇಕು, 2025-26 ನೇ ಸಾಲಿನಲ್ಲಿ ದ್ರಾಕ್ಷಿ ಬೆಳೆಯಲು ಯೋಗ್ಯ ವಾತಾವರಣ ಇಲ್ಲ, ಕೂಡಲೇ ಜಂಟಿ ಸಮೀಕ್ಷೆ ಕೈಕೊಂಡು ಪ್ರಕೃತಿ ವಿಕೋಪದಿಂದ ಆಗಿರುವ ನಷ್ಟಕ್ಕೆ ಪರಿಹಾರವನ್ನು ನ್ಯಾಯಯುತವಾಗಿ ನೀಡಬೇಕು. ದ್ರಾಕ್ಷಿಗೆ ಹವಾಮಾನ ಆಧಾರಿತ ವಿಮೆ ನೀಡುವ ವಿಷಯದಲ್ಲಿ ಅಕ್ರಮ ಕಂಡು ಬರುತ್ತಿದ್ದು, ಇದನ್ನು ಸರಿ ಪಡಿಸಿ ನ್ಯಾಯಯುತವಾಗಿ ನಷ್ಟ ಪರಿಹಾರ ನೀಡಬೇಕು. ಅವಶ್ಯಕತೆಗೆ ಅನುಗುಣವಾಗಿ ಕೋಲ್ಡ್ ಸ್ಟೋರೆಜ್ ಸ್ಥಾಪನೆ ಮಾಡಬೇಕು, ಸರ್ಕಾರಿ ಕೋಲ್ಡ್ ಸ್ಟೋರೆಜ್ ಭೂಮಿ ಪೂಜೆಯಾಗಿ ಬಹುದಿನಗಳೇ ಕಳೆದಿವೆ, ಅದು ಪ್ರಾರಂಭವಾಗಬೇಕು. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ವೈನ್ ಪಾರ್ಕ್ ಕೂಡಲೇ ಪ್ರಾರಂಭವಾಗಬೇಕು ಎಂದರು.
ಎ.ಪಿ.ಎಂ.ಸಿ ಅಡಿಯಲ್ಲಿ ದ್ರಾಕ್ಷಿ (ಮನುಕು) ಖರೀದಿ ಪುನಃ ಆರಂಭವಾಗಬೇಕು, ಇದರಿಂದ ಮಹಾರಾಷ್ಟ್ರಕ್ಕೆ ಹೋಗುವ ಖರ್ಚು ಉಳಿದು ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ.
ದ್ರಾಕ್ಷಿ ಇಲ್ಲದ ಜಮೀನಿಗೆ ವಿಮೆ ತುಂಬಿ, ದ್ರಾಕ್ಷಿ ಹೊಲ ಎಂದು ರೈತರಿಂದ ಹಣ ಪಡೆದು ಬ್ಯಾನರ್ ಇಟ್ಟು ಜಿ.ಪಿ.ಎಸ್ ಮಾಡುತ್ತಿದ್ದು, ಇದರಿಂದ ನೈಜ ದ್ರಾಕ್ಷಿ ಬೆಳೆಗಾರರಿಗೆ ಪೆಟ್ಟು ಬೀಳಲಿದೆ, ಇಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ನಕಲಿ ಬೀಜ, ಗೊಬ್ಬರ ಹಾಗೂ ಕೀಟನಾಶಕಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಜಕರಾಯ ಪೂಜಾರಿ, ಕನ್ನಪ್ಪ ಕೊಂಡಿ, ಈಶ್ವರ ಯಳಜೇರಿ, ಮಲ್ಲಪ್ಪ ಕೋಮಡಿ, ಕುಮಾರ ಚಡಚಣ, ಸದಾಶಿವ ಘಡಾಲಟ್ಟಿ, ರಾಮಚಂದ್ರ ಅಗಸರ, ಬಸಪ್ಪ ಮಾಳಿ, ಶಿವು ಪಟ್ಟಣಶೆಟ್ಟಿ, ಅಶೋಕ ಶಿರೋಳ, ಭೀಮು ತೋನಶೆಟ್ಟಿ, ಭೀಮು ಬಡಕುರಿ, ಅಮರ ಪೂಜರಿ, ಭೀರು ಗಡದಿ, ಬಾಲಿಸಾಬ ಮುಲ್ಲಾ, ಶೀವು ಮಾಳಿ ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ ಅನೇಕ ದ್ರಾಕ್ಷಿ ಪಡಗಳಲ್ಲಿ ನೀರು ನಿಂತು ಬೆಳೆ ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ಕೊಡಬೇಕು.– ಸಂಗಮೇಶ ಸಗರ, ಅಧ್ಯಕ್ಷ ಜಿಲ್ಲಾ ಘಟಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.