ADVERTISEMENT

ವಾಟಾಳ್ ನಾಗರಾಜ್ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ಪೊಲೀಸರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 5:29 IST
Last Updated 1 ಡಿಸೆಂಬರ್ 2020, 5:29 IST
ವಾಟಾಳ್ ನಾಗರಾಜ್‌ ವಶಕ್ಕೆ ಪಡೆದುಕೊಳ್ಳಲು ಆಲಮಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ಕಾಯುತ್ತಿರುವ ಪೊಲೀಸರು – ಪ್ರಜಾವಾಣಿ ಚಿತ್ರ
ವಾಟಾಳ್ ನಾಗರಾಜ್‌ ವಶಕ್ಕೆ ಪಡೆದುಕೊಳ್ಳಲು ಆಲಮಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ಕಾಯುತ್ತಿರುವ ಪೊಲೀಸರು – ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ಬರುತ್ತಿರುವ ವಾಟಾಳ್ ನಾಗರಾಜ್ ವಿಜಯಪುರ ಪ್ರವೇಶಿಸದಂತೆ ತಡೆಯಲು ಬಸವನಬಾಗೇವಾಡಿ ಡಿವೈಎಸ್‌ಪಿ ಈ. ಶಾಂತವೀರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಆಲಮಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ 8.30ರಿಂದ ಕಾಯುತ್ತಿದ್ದಾರೆ.

ಮರಾಠಾ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳನ್ನು ಹಾಗೂ ಹೋರಾಟಗಾರರನ್ನು ರೋಲ್‌ಕಾಲ್ ಹೋರಾಟಗಾರರು ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ವಾಟಾಳ್ ನಾಗರಾಜ್ ಬರುತ್ತಿದ್ದಾರೆ.

ಆಲಮಟ್ಟಿಯಲ್ಲೇ ಅವರನ್ನು ವಶಕ್ಕೆ ಪಡೆದು ಇಡೀ ದಿನ ಅವರನ್ನು ಅಲ್ಲಿಯ ಪ್ರವಾಸಿ ಮಂದಿರದಲ್ಲಿ ಇಡುವ ಸಾಧ್ಯತೆಯಿದೆ.

ADVERTISEMENT

ಮರಾಠಾ ನಿಗಮ ಸ್ಥಾಪನೆ ವಿರೋಧಿಸಿ ವಿಜಯಪುರದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಹೇಗೆ ಪ್ರತಿಭಟನೆ ಮಾಡುತ್ತಾರೆ ನೋಡುತ್ತೇನೆ ಎಂಬ ಯತ್ನಾಳ ಅವರ ಧಮಕಿಗೆ ಉತ್ತರ ನೀಡಲು ವಿಜಯಪುರದಲ್ಲೇ ಪ್ರತಿಭಟನೆ ನಡೆಸಲು ವಾಟಾಳ್ ಮತ್ತು ಅವರ ಬೆಂಬಲಿಗರು ನಿರ್ಧರಿಸಿದ್ದಾರೆ.

ವಾಟಾಳ್ ವಿಜಯಪುರಕ್ಕೆ ಬಂದರೆ ಯತ್ನಾಳ ಬೆಂಬಲಿಗರೊಂದಿಗೆ ಘರ್ಷಣೆಯಾಗಬಹುದು.ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣಕ್ಕೆ ಅವರನ್ನು ಜಿಲ್ಲೆ ಪ್ರವೇಶಿಸದಂತೆ ತಡೆಗಟ್ಟಲು ಪೊಲೀಸರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.