ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕಳ್ಳಿಮನಿ ಅವರು ಜಿಲ್ಲೆಯ ಇಟ್ಟಂಗಿಹಾಳ ಗ್ರಾಮದ ಅಡವಿಯಲ್ಲಿ ಅಲೆಮಾರಿ ಕುರಿಗಾಹಿಗಳ ಟೆಂಟ್ಗೆ ಶುಕ್ರವಾರ ಸಂಜೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದರು. ಬಳಿಕ ಟೆಂಟ್ನಲ್ಲೇ ರಾತ್ರಿ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದರು.
ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆಗ್ರಾಮಕ್ಕೆ ಬಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯನ್ನು ಗ್ರಾಮಸ್ಥರು ಡೊಳ್ಳು, ವಾದ್ಯ ಮೇಳಗಳೊಂದಿಗೆ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಅಡವಿ ವಾಸ್ತವ್ಯಕ್ಕೆ ಮೆರವಣಿಗೆ ಮೂಲಕ ಕರೆದೊಯ್ದರು.
ವಾಸ್ತವ್ಯಕ್ಕೆ ತೆರಳುವ ಮುನ್ನಾ ಇಟ್ಟಂಗಿಗಾಳ ಗ್ರಾಮದಲ್ಲಿರುವಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಕಳ್ಳಿಮನಿ ಮಾಲಾರ್ಪಣೆ ಮಾಡಿದರು.
ನಂತರ ನಡೆದ ಸಂವಾದದಲ್ಲಿ, ಮತದಾರರ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಮಾಡಿಸಿಕೊಡುವಂತೆ ಹಾಗೂ ವೃದ್ಧಾಪ್ಯ, ವಿಧವಾ, ಅಂಗವಿಕಲ ಮಾಸಾಶನ ಮಂಜೂರು ಮಾಡಿಸಿಕೊಡುವಂತೆ ಕುರಿಗಾಹಿಗಳು ಮನವಿ ಮಾಡಿದರು.
ಸ್ವಂತ ಗ್ರಾಮಗಳಲ್ಲಿ ನಿವೇಶನ, ಮನೆ ಮಂಜೂರು ಹಾಗೂ ಎನ್ಆರ್ಇಜಿ ಉದ್ಯೋಗ ಚೀಟಿ ಮಾಡಿಕೊಡುವಂತೆ ಕುರಿಗಾಹಿಗಳು ಕೋರಿದರು.
ಕುರಿ ಸಾಕಾಣಿಕೆ ಜೊತೆಗೆ ಹೈನುಗಾರಿಕೆ, ಸಾಲಸೌಲಭ್ಯ, ದೊಡ್ಡಿಗಳಲ್ಲಿ ಕುರಿ ರಕ್ಷಣೆಗಾಗಿ ಟೆಂಟ್ ಸೌಲಭ್ಯ, ಕುರಿಗಳಿಗೆ ವಿಮಾ ಸೌಲಭ್ಯ ಒದಗಿಸುವಂತೆಯೂ ಮನವಿ ಮಾಡಿದರು.
ಕುರಿಗಾಹಿಗಳ ಮನವಿ ಆಲಿಸಿದ ಅಧ್ಯಕ್ಷೆ, ಈ ಸಂಬಂಧ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರೊಂದಿಗೆ ಚರ್ಚಿಸಿ, ಎಲ್ಲ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ತಿಕೋಟಾ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ನಾಟಿಕರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಡಾ.ಬಸವರಾಜ ಅಸ್ಕಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕಲ್ಲಪ್ಪ ಮಟ್ಟಿ, ಮುಖಂಡರಾದ ಬೀರಪ್ಪ ಕಾಳೆ, ಬೀರಪ್ಪ ಮಾನೆ, ಮಲ್ಲಪ್ಪ ಬಿದರಿ, ದೇವಕಾಂತ ಬಿಜ್ಜರಗಿ, ಚಂದ್ರಶೇಖರ ತೋಳಮಟ್ಟಿ, ಮಹಾದೇವ ಹಿರೇಕುರಬರ, ಯಶವಂತ ಕರಾತ್, ಬೀರಪ್ಪ ಕರಾತ್, ಅಮೋಘಿ ಕರಾತ್, ಬೀವಾ ಮಾನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.