ADVERTISEMENT

ವಕ್ಫ್‌ ಆಸ್ತಿ ವಿವಾದ: ಬಿಜೆಪಿ ತಂಡಕ್ಕೆ ತಿರುಗೇಟು ಕೊಟ್ಟ ಮಾಜಿ ಶಾಸಕ ರಾಜು ಆಲಗೂರ

ವಿಜಯಪುರಕ್ಕೆ ಭೇಟಿ ನೀಡಿರುವ ಬಿಜೆಪಿ ತಂಡಕ್ಕೆ ಕಾಂಗ್ರೆಸ್‌ ಮುಖಂಡರಿಂದ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 7:07 IST
Last Updated 29 ಅಕ್ಟೋಬರ್ 2024, 7:07 IST
   

ವಿಜಯಪುರ: ವಕ್ಫ್ ಆಸ್ತಿ ವಿಷಯವಾಗಿ ಈ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲೂ ವಿಜಯಪುರ ಜಿಲ್ಲೆಯ 25ಕ್ಕೂ ಅಧಿಕ ರೈತರಿಗೆ ನೋಟಿಸ್‌ ನೀಡಲಾಗಿತ್ತು ಎಂಬ ವಿಷಯವನ್ನು ಕಾಂಗ್ರೆಸ್‌ ಮುಖಂಡರು ಬಹಿರಂಗಗೊಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ (2022ರ ಸೆಪ್ಟೆಂಬರ್‌ 9 ರಿಂದ ನವೆಂಬರ್‌ 18) ವಿಜಯಪುರ ಜಿಲ್ಲೆಯ 25 ರೈತರಿಗೆ ವಕ್ಫ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿತ್ತು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ವಿಜಯಪುರ ಜಿಲ್ಲೆಯ ರೈತರಾದ ಆನಂದ ಚಂದ್ರಶೇಖರ ಹಡಪದ, ಅಶೋಕ ಬಣ್ಣದ, ಬಡಿಯಾಲ ಜಮನ ಲಾಹೋರಿ, ಗೋವಿಂದ ಲಿಂಗಸಾ, ಗಿರಿಮಲ್ಲಪ್ಪ ಚನ್ನಾಳ, ಎ. ಸಂಜಯಕುಮಾರ ಶಶಿಮಲ್ಲ ಜೈನ, ಮಹಾವೀರ ಶಂಕರಲಾಲ್‌ ಒಸ್ವಾಲ್‌, ರವಿ ರಾಮಣ್ಣ ಮಾದರ, ಬಸಪ್ಪ ಶಿದಪ್ಪ ಬಂಗಾರಿ, ಮಹಾಲಿಂಗಯ್ಯ ನಾಗಯ್ಯ ಹಿರೇಮಠ ಮತ್ತಿತರ ರೈತರಿಗೆ ವಕ್ಫ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿತ್ತು. ಈ ರೈತರು ಯಾವ ಸಮುದಾಯಕ್ಕೆ ಸೇರಿದವರು  ಎಂಬುದಕ್ಕೆ ಬಿಜೆಪಿ ಮುಖಂಡರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. 

ADVERTISEMENT

ಆಗ ಅಧಿಕಾರ ಅನುಭವಿಸುತ್ತಿದ್ದ ಬಿಜೆಪಿಯವರಿಗೆ ರೈತರಿಗೆ ನೋಟಿಸ್‌ ನೀಡಿ, ಅವರ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಮರಳಿ ಪಡೆದ ಸಂದರ್ಭದಲ್ಲಿ ವಿಷಯ ತಿಳಿದಿರಲಿಲ್ಲವೇ? ಅಥವಾ ವಿಷಯ ತಿಳಿದು ಸುಮ್ಮನಿದ್ದರಾ? ಅಧಿಕಾರದಲ್ಲಿಗ ಒಂದು ಕಾಯ್ದೆ? ಅಧಿಕಾರಲ್ಲಿ ಇಲ್ಲದಿದ್ದಾಗ ಇನ್ನೊಂದು ಕಾಯ್ದೆಯಾ? ಎಂದು ಪ್ರಶ್ನಿಸಿದರು.

ಬಿಜೆಪಿ ತಂಡಕ್ಕೆ ನಾಲ್ಕು ಪ್ರಶ್ನೆ

ವಕ್ಫ್‌ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ರೈತರ ಆಹವಾಲು ಆಲಿಸಲು ಬಂದಿರುವ ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ರಾಜ್ಯ ತಂಡ ಕಾಂಗ್ರೆಸ್‌ನ ನಾಲ್ಕು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು  ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಆಗ್ರಹಿಸಿದರು.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಎಷ್ಟು ಆಸ್ತಿಯನ್ನು ರೈತರು, ಸಾರ್ವಜನಿಕರಿಂದ ವಕ್ಫ್‌ ಆಸ್ತಿ ಎಂದು ಮರಳಿ ಪಡೆದಿದ್ದೀರಿ? ಅವುಗಳನ್ನು ಮ್ಯುಟೇಶನ್ ಮಾಡಿ, ವಕ್ಫ್ ಆಸ್ತಿ ನೋಂದಣಿ ಮಾಡಿದ್ದೀರಿ? ಎಷ್ಟು ರೈತರು, ಸಾರ್ವಜನಿಕರಿಗೆ ನೋಟಿಸ್‌ ನೀಡಿದ್ದಾರೆ? ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಎಷ್ಟು ಗೆಜೆಟ್ ನೋಟಿಫಿಕೇಶನ್‍ ಹೊರಡಿಸಿದ್ದಾರೆ? ವಕ್ಫ್ ಆಸ್ತಿ ಸಂರಕ್ಷಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಬಂಧಿಸಿದ ಸಚಿವರು ಎಷ್ಟು ಸಭೆಗಳನ್ನು ನಡೆಸಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಹಿಜಾಬ್‌, ಹಲಾಲ್, ಉರಿಗೌಡ-ನಂಜೆಗೌಡ ಪ್ರಕರಣಗಳನ್ನು ಸೃಷ್ಠಿಸಿ, ರಾಜಕೀಯ ಮಾಡುತ್ತಿದ್ದ ಬಿಜೆಪಿ ಮುಖಂಡರಿಗೆ ತಾವು ಅಧಿಕಾರಿದಲ್ಲಿದ್ದಾಗ ವಕ್ಫ್ ಮಂಡಳಿ ರೈತರಿಗೆ ನೋಟಿಸ್ ನೀಡಿದಾಗ ಸುಮ್ಮನಿದ್ದರು. ಇದೀಗ ನೆರೆಯ ಮಹಾರಾಷ್ಟ್ರದ ಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಠಿ ಮಾಡಿ, ರಾಜಕೀಯ ಲಾಭ ಪಡೆಯಲು ಮುಗ್ದ ರೈತರನ್ನು ಪ್ರಚೋದಿಸಿ, ಹೋರಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಕೆಪಿಸಿಸಿ ವಕ್ತಾರ ಎಸ್. ಎಂ.ಪಾಟೀಲ ಗಣಿಯಾರ, ಮುಖಂಡರಾದ ಅಬ್ದುಲ್ ಹಮೀದ್‌ ಮುಶ್ರಿಫ್ ಮತ್ತು ಗಂಗಾಧರ ಸಂಬಣ್ಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.