ಸಿಂದಗಿ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕಾಲೇಜು ಕ್ಯಾಂಪಸ್ ಹಚ್ಚ ಹಸಿರು ಪರಿಸರ ಹೊಂದಿದೆ. ಇಲ್ಲಿ ಗ್ರೀನ್ ಹೌಸ್ ಕೂಡ ಇದೆ. ನೀರಿನ ಸದ್ಭಳಕೆ ಕ್ಯಾಂಪಸ್ ನಲ್ಲಿ ಕಾಣಬಹುದು. ವ್ಯರ್ಥ ನೀರೆಲ್ಲ ಇಲ್ಲಿ ಉಪಯುಕ್ತವಾಗುತ್ತಿದೆ.
ಎರಡು ತಿಂಗಳ ಹಿಂದಷ್ಟೇ ಕಾಲೇಜು ಆವರಣದಲ್ಲಿ ₹21 ಲಕ್ಷ ವೆಚ್ಚದಲ್ಲಿ ಸಿಕ್ವೆನ್ಸ್ ಬ್ಯಾಚ್ ರಿಯಾಕ್ಟರ್ ಯುನಿಟ್ ಪ್ರಾರಂಭಗೊಳಿಸಲಾಗಿದೆ. ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದ ಬಳಿ ಈ ಯುನಿಟ್ ಇದೆ.
240 ವಿದ್ಯಾರ್ಥಿನಿಯರನ್ನೊಳಗೊಂಡ ಹಾಸ್ಟೆಲ್ನಿಂದ ಸ್ನಾನದ ನೀರು, ಶೌಚಾಲಯದ ನೀರು ಅಪಾರ ಪ್ರಮಾಣದಲ್ಲಿ ಶೇಖರಣೆಗೊಂಡು ಸುತ್ತಲೂ ಮಲೀನಗೊಂಡಿತ್ತು. ಅಷ್ಟೇ ಗಬ್ಬು ವಾಸನೆಯೂ ಇತ್ತು. ಇದನ್ನು ಗಮನಿಸಿದ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಜಲಶುದ್ದೀಕರಣ ಘಟಕ ಸ್ಥಾಪನೆಗೆ ಮುಂದಾಗಿ ಮಹದುಪಕಾರ ಮಾಡಿದ್ದಾರೆ. ಇಂಥ ಯುನಿಟ್ಗಳ ಬಳಕೆ ಹೆಚ್ಚಿದರೆ ಹನಿ, ಹನಿ ನೀರಿನ ಸದ್ಬಳಕೆಯಾಗುವ ಮೂಲಕ ನೀರಿನ ಕೊರತೆ ನಿವಾರಣೆಯಾಗಬಹುದಾಗಿದೆ. ಇಂಥ ಯುನಿಟ್ಗನ್ನು ಪಟ್ಟಣಗಳ ಪುರಸಭೆಗಳು ಅಳವಡಿಸಿಕೊಂಡರೆ ತುಂಬಾ ಉಪಯೋಗಕಾರಿಯಾಗುತ್ತದೆ ಎನ್ನುತ್ತಾರೆ ಕಾಲೇಜು ಪ್ರಾಚಾರ್ಯ ಡಿ.ಎಂ.ಪಾಟೀಲ.
ಸಂಸದರು, ಶಾಸಕರು ಸಮುದಾಯ ಭವನಗಳಿಗೆ ನೀಡುವ ಅನುದಾನವನ್ನು ಇಂಥ ಪ್ರಯೋಜನಕಾರಿ ಜಲ ಶುದ್ಧೀಕರಣ ಘಟಕಗಳಿಗೆ ನೀಡಿದರೆ ಆರೋಗ್ಯಕರ ಪರಿಸರ ಮತ್ತು ನೀರಿನ ಕೊರತೆ ಹೋಗಲಾಡಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಾಧ್ಯಾಪಕ ಡಾ.ನಾಗರಾಜ ಮುರಗೋಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.