ADVERTISEMENT

ಮಾಸ್ಕ್ ಕಡ್ಡಾಯ ಧರಿಸಿ: ನ್ಯಾಯಾಧೀಶ ಸೂಚನೆ

ಕೋವಿಡ್ ನಿಯಂತ್ರಣಕ್ಕೆ ಜನಾಂದೋಲನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 12:54 IST
Last Updated 17 ಅಕ್ಟೋಬರ್ 2020, 12:54 IST
ವಿಜಯಪುರದಲ್ಲಿ ಶನಿವಾರ ಕೋವಿಡ್ ಜಾಗೃತಿ ಜನಾಂದೋಲನಕ್ಕೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾನಂದ ನಾಯಕ ಚಾಲನೆ ನೀಡಿದರು
ವಿಜಯಪುರದಲ್ಲಿ ಶನಿವಾರ ಕೋವಿಡ್ ಜಾಗೃತಿ ಜನಾಂದೋಲನಕ್ಕೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾನಂದ ನಾಯಕ ಚಾಲನೆ ನೀಡಿದರು   

ವಿಜಯಪುರ: ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರು ಮಾಸ್ಕ್ಕಡ್ಡಾಯವಾಗಿ ಧರಿಸಬೇಕು, ಕೈಗಳ ನೈರ್ಮಲ್ಯ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸದಾನಂದ ನಾಯಕ ಸೂಚಿಸಿದರು.

ಕೋವಿಡ್ ಜಾಗೃತಿ ಜನಾಂದೋಲನಕ್ಕೆ ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಕುರಿತು ಸದಾ ಮುನ್ನೆಚ್ಚರಿಕೆಯಿಂದ ಇರಬೇಕು. ಮಾರಾಣಾಂತಿಕ ವೈರಾಣು ಹರಡುವುದನ್ನು ತಡೆಯಲು ಖುದ್ದಾಗಿ ಮುನ್ನೆಚ್ಚರಿಕೆ ವಹಿಸಬೇಕು.ಎಲ್ಲರು ಒಟ್ಟಾಗಿ ಕೋವಿಡ್‌ ವಿರುದ್ಧ ಜಯಗಳಿಸೋಣ ಎಂದರು.

ADVERTISEMENT

ಜಾಥಾವುಗಾಂಧಿ ವೃತ್ತ, ಸರಾಫ್ ಬಜಾರ್, ರಾಮ ಮಂದಿರ ರಸ್ತೆ, ಸಿದ್ದೇಶ್ವರ ಗುಡಿ ಮಾರ್ಗವಾಗಿ ನಗರದಲ್ಲಿ ಜಾಥಾ ನಡೆಸಲಾಯಿತು.

ಹತ್ತಿರ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ, ಅಂಗಡಿ ವ್ಯಾಪಾರಸ್ಥರಿಗೆ, ತಳ್ಳುವ ಗಾಡಿ ವ್ಯಾಪಾರಸ್ಥರಿಗೆ, ಮಹಿಳೆಯರು, ವೃದ್ಧರು, ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಜನಾಂದೋಲನ ಅಂಗವಾಗಿ ಗಾಂಧಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋವಿಡ್‌ ನಿಯಂತ್ರಣ ಪ್ರತಿಜ್ಞಾ ವಿಧಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಬೋಧಿಸಿದರು.

ಜಿಲ್ಲಾ ಕೋರ್ಟ್‌ ಆವರಣ, ಸಿದ್ದೇಶ್ವರ ದೇವಸ್ಥಾನ ಆವರಣ, ಎಪಿಎಂಸಿ ಆವರಣದಲ್ಲೂ ಜಾಥಾ ನಡೆಸಲಾಯಿತು.ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಿಸಿದ್ದಿ, ಡಿವೈಎಸ್‍ಪಿ ಲಕ್ಷ್ಮೀ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪಸೆ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಸಂಪತ್‍ಕುಮಾರ ಗುಣಾರೆ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಎಂ.ಬಿ. ಬಿರಾದಾರ, ತಹಶೀಲ್ದಾರ್‌ ಮೋಹನ್‍ಕುಮಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್ ನದಾಫ್, ಎಪಿಎಂಸಿ ಸಹಾಯಕ ನಿರ್ದೇಶಕ ಛಬನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.