ವಿಜಯಪುರ: ಜಿಲ್ಲೆಯ ಕಲಕೇರಿ ಸಮೀಪದ ಹುಣಶ್ಯಾಳ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಒಬ್ಬ ರೈತ ಮಹಿಳೆ ಹಾಗೂ ಒಂದು ಎಮ್ಮೆ ಸಾವನ್ನಪ್ಪಿದೆ.
ಜೈನಾಬಿ ನಜೀರ್ ಅಹ್ಮದ್ ಸಿಪಾಯಿ (55) ಹೊಲದಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಪಕ್ಕದಲ್ಲೇ ಇದ್ದ ಎಮ್ಮೆ ಕೂಡ ಸಿಡಿಲಾಘಾತದಿಂದ ಸಾವಿಗೀಡಾಗಿದೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ 15 ಮನೆಗಳಿಗೆ ಹಾನಿಯಾಗಿದೆ. ಇಂಡಿ ತಾಲ್ಲೂಕಿನ ಬಳ್ಳೊಳ್ಳಿಯಲ್ಲಿ ಮೂರು ಮನೆಗಳು ಭಾಗಶಃ ಬಿದ್ದಿವೆ. ವಿಜಯಪುರ ತಾಲ್ಲೂಕಿನಲ್ಲಿ ಐದು, ತಾಳಿಕೋಟೆ ತಾಲ್ಲೂಕಿನಲ್ಲಿ ಎರಡು, ಸಿಂದಗಿ, ತಿಕೋಟಾ ಮತ್ತು ನಿಡಗುಂದಿ ತಾಲ್ಲೂಕಿನಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮುದ್ದೇಬಿಹಾಳ, ಬಸವನ ಬಾಗೇವಾಡಿ ವ್ಯಾಪ್ತಿಯಲ್ಲಿ ರಭಸದ ಮಳೆಯಾಗಿದೆ. ವಿಜಯಪುರ ನಗರ, ಸಿಂದಗಿ, ತಿಕೋಟಾ, ಇಂಡಿ, ಕೊಲ್ಹಾರ, ತಾಂಬಾ, ಆಲಮೇಲ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬೆಳಿಗ್ಗೆ ಮತ್ತು ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8ರ ವರೆಗೆ ವಿಜಯಪುರ ನಗರದಲ್ಲಿ 38.6 ಮಿ.ಮೀ.ಮಳೆಯಾಗಿದೆ. ಉಳಿದಂತೆ ಬಸವನ ಬಾಗೇವಾಡಿಯಲ್ಲಿ 18.2, ಮನಗೂಳಿ 5.1, ಆಲಮಟ್ಟಿ 29.6, ಹೂವಿನ ಹಿಪ್ಪರಗಿ 13.2, ಅರೇಶಂಕರ 29, ಮಟ್ಟಿಹಾಳ 19, ವಿಜಯಪುರ 38.6, ಭೂತನಾಳ 14.4, ಹಿಟ್ನಳ್ಳಿ 21.2, ತಿಕೋಟಾ 21.4, ಮಮದಾಪೂರ 31, ಕುಮಟಗಿ 11.2, ಬಬಲೇಶ್ವರ 23.2, ಮುದ್ದೆಬಿಹಾಳ 3.6, ನಾಲತವಾಡ 48.4, ತಾಳಿಕೋಟಿ 46.1, ಢವಳಗಿ 25, ಸಿಂದಗಿ 9.2, ಆಲಮೇಲ 8, ಸಾಸಾಬಾಳ 15.2, ರಾಮನಹಳ್ಳಿ 4.8, ಕಡ್ಲೆವಾಡ 21.5, ದೇವರಹಿಪ್ಪರಗಿ 14, ಕೊಂಡಗೂಳಿ 31 ಸೇರಿದಂತೆ ಜಿಲ್ಲೆಯಲ್ಲಿ 16.38 ಮಿ.ಮೀ. ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.