ADVERTISEMENT

ಅಂಚೆಕಚೇರಿಗೆ ಸೌಲಭ್ಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2012, 6:53 IST
Last Updated 30 ನವೆಂಬರ್ 2012, 6:53 IST

ಸುರಪುರ: ಪಟ್ಟಣದ ಅಂಚೆಕಚೇರಿಗೆ ಸಮರ್ಪಕ ಸೌಲಭ್ಯ ಒದಗಿಸುವಂತೆ ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಚೀಫ್ ಪೋಸ್ಟ ಮಾಸ್ಟರ್ ಜನರಲ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಗುರುವಾರ ಅಂಚೆ ಕಚೇರಿಗೆ ಭೇಟಿ ನೀಡಿದ್ದ ಉಸ್ತಾದ್ ಅಲ್ಲಿನ ಅವ್ಯವಸ್ಥೆ ಕಂಡು ದಂಗಾದರು. ತಕ್ಷಣ ಪೋಸ್ಟ್ ಮಾಸ್ಟರ್ ಸಿ. ಬಿ. ಹಾದಿಮನಿ ಮತ್ತು ಟ್ರೆಜರರ್ ಶಂಕರಗೌಡ ಕೋಳಿಹಾಳ ಅವರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜನತಾದಳದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಉಪಸ್ಥಿತರಿದ್ದರು.

ಹೆಡ್ ಪೋಸ್ಟ್ ಆಫೀಸ್ ಆಗಿದ್ದ ಈ ಅಂಚೆ ಕಚೇರಿಯಿಂದ ಅದನ್ನು 2006 ರಲ್ಲಿ ಹಿಂತೆಗೆದುಕೊಂಡು ಯಾದಗಿರಿಗೆ ಸ್ಥಳಾಂತರಿಸಲಾಗಿದ್ದನ್ನು ಅಂದು ತಮ್ಮ ನೇತೃತ್ವದಲ್ಲಿ ಪ್ರತಿಭಟಿಸಿದರೂ ಅಂಚೆ ಇಲಾಖೆ ಸ್ಪಂದಿಸಿದ್ದನ್ನು ಈ ಸಂದರ್ಭದಲ್ಲಿ ಉಸ್ತಾದ್ ಜ್ಞಾಪಿಸಿಕೊಂಡರು.

ಗಾಂಧಿವೃತ್ತದಲ್ಲಿ ಇರುವ ಭವ್ಯ ಕಟ್ಟಕ್ಕೆ 15 ವರ್ಷಗಳಿಂದ ಸುಣ್ಣ ಬಣ್ಣ ಹಚ್ಚಿಲ್ಲ. ಕಟ್ಟಡಕ್ಕೆ ಕಂಪೌಂಡ್ ಇಲ್ಲದಿರುವುದರಿಂದ ಹಂದಿಗಳು ಒಳ ನುಗ್ಗುತ್ತಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಿಟಕಿಗಳ ಬಾಗಿಲು ಒಡೆದುಹೋಗಿವೆ. ಇದರಿಂದ ಕಳ್ಳತನದ ಭಯವಿದೆ. ಕಚೇರಿ ಮುಂದೆ ಇರುವ ಚರಂಡಿಯಿಂದ ದುರ್ನಾತ ಬೀರುತ್ತಿದೆ. ಸಿಬ್ಬಂದಿ ಸಂಬಳ ಮತ್ತು ಇತರ ಕಾರ್ಯಗಳಿಗೆ ಯಾದಗಿರಿ ಹೆಡ್‌ಪೋಸ್ಟ್ ಆಫೀಸ್‌ಗೆ ಹೋಗಬೇಕು. ಠೇವಣಿಗಳ ಕ್ಲೋಸರ್‌ಗೆ ಯಾದಗಿರಿ ಕಚೇರಿಯ ಅಂಕಿತ ಪಡೆದುಕೊಳ್ಳಬೇಕು. ಇದರಿಂದ ತೊಂದರೆಯಾಗಿದೆ ಎಂದು ವಿವರಿಸಲಾಗಿದೆ.

ಕಚೇರಿಯಲ್ಲಿ ಕುಳಿತುಕೊಳ್ಳಲು ಪೀಠೋಪಕರಣಗಳಿಲ್ಲ. ಗ್ರಾಹಕರು ನಿಂತುಕೊಂಡೆ ವಿಚಾರಣೆ ಮಾಡಬೇಕು. ಹೀಗೆ ಸಮಸ್ಯೆಗಳ ಸುರಿಮಳೆಯೆ ಇರುವ ಅಂಚೆ ಕಚೇರಿ ನರಳುತ್ತಿದೆ. ಕಾರಣ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಉಸ್ತಾದ್ ಆಗ್ರಹಿಸಿದ್ದಾರೆ.

ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ವಿಮೆ, ರಾಷ್ಟ್ರೀಯ ಉಳಿತಾಯ ಪತ್ರ. ಉಳಿತಾಯ ಖಾತೆ, ರಿಕರಿಂಗ್ ಡಿಪಾಸಿಟ್ ಇತರ ರೆವೆನ್ಯೂಗಳಲ್ಲಿ ಇಲ್ಲಿನ ಅಂಚೆ ಕಚೇರಿ ರಾಜ್ಯದಲ್ಲಿ ಆಗ್ರ ಸ್ಥಾನದಲ್ಲಿದೆ. ಆದರೂ ಸೌಲಭ್ಯಗಳಿಂದ ವಂಚಿತವಾಗಿದೆ. ಸಮರ್ಪಕ ಸಿಬ್ಬಂದಿ ಇಲ್ಲ ಎಂದು ತಿಳಿಸಲಾಗಿದೆ. ಸುರಪುರಕ್ಕೆ ಹೆಡ್ ಪೋಸ್ಟ್ ಆಫೀಸ್ ಮಂಜೂರು ಮಾಡಿ ಎಲ್ಲ ಸೌಲಭ್ಯ ಒದಗಿಸಬೇಕು. ಯಾದಗಿರಿಗೆ ಡಿವಿಜನ್ ಅಫೀಸ್ ಮಂಜೂರು ಮಾಡಬೇಕು. ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಉಸ್ತಾದ್ ವಜಾಹತ್ ಹುಸೇನ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.