ADVERTISEMENT

`ಅಗಸ್ಟ್‌ನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:14 IST
Last Updated 8 ಜುಲೈ 2013, 10:14 IST

ಸುರಪುರ: ಯಾದಗಿರಿಯಲ್ಲಿ ಅಗಸ್ಟ್ 24 ರಂದು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಖ್ಯಾತ ಲೇಖಕ ಸಿದ್ಧರಾಮ ಹೊನ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ತಿಳಿಸಿದರು.

ಇಲ್ಲಿನ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ನಡೆದ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಮಟ್ಟದ ಸಭೆ ಬಳಿಕ ಮಾತನಾಡಿದರು.
ಹಿರಿಯ ಚುಟುಕು ಸಾಹಿತಿ ನಾಗಪ್ಪ ತ್ರಿವೇದಿ, ಸಾಹಿತಿಗಳಾದ ನಬಿಲಾಲ ಮಕಾನದಾರ್, ವಿಶ್ವನಾಥರೆಡ್ಡಿ ಗೊಂದಡಗಿ, ವೈದ್ಯ ಸಾಹಿತಿ ಗುರುರಾಜ ಅರಿಕೇರಿ ಆವರ ಹೆಸರುಗಳು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಕ್ಕೆ ಬಂದಿದ್ದವು. ಹೊನ್ಕಲ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಸ್ವಾಗತ ಸಮಿತಿಯ ಸದಸ್ಯರನ್ನಾಗಿ ಬಸವರಾಜ ಜಮದ್ರಖಾನಿ ಅವರನ್ನು ಆಯ್ಕೆ ಮಾಡಲಾಯಿತು ಎಂದರು.

ಕನ್ನಡ ಸಾಹಿತ್ಯ ಪರಿಷತ್ ನಿಷ್ಕ್ರಿಯಗೊಂಡಿದೆ. ಇದರಿಂದ ಜಿಲ್ಲೆಯಾದ್ಯಂತ ಕನ್ನಡ ಚಟುವಟಿಕೆಗಳಿಗೆ ಬರ ಬಂದಿತ್ತು. ಚುಟುಕು ಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಸಮ್ಮೇಳನ ನಡೆಸುತ್ತಿರುವುದು ಸ್ವಾಗತಾರ್ಹ. ಇದರಿಂದ ಕನ್ನಡ ಚಟುವಟಿಕೆಗಳು ಮತ್ತೆ ಗರಿಗೆದರಲಿವೆ. ಇದು ಉತ್ತಮ ಬೆಳವಣಿಗೆ ಎಂದರು.

ಇಂದಿನ ದಿನಗಳಲ್ಲಿ ಬಹುತೇಕ ಓದುಗರ ಸಂಕುಚಿತರಾಗುತ್ತಿದ್ದಾರೆ. ಅವರಿಗೆ ದೊಡ್ಡ ಲೇಖನ, ಕವಿತೆಗಳನ್ನು ಓದಲು ಸಮಯ ಸಾಲುತ್ತಿಲ್ಲ. ಹೀಗಾಗಿ ಚುಟುಕು ಸಾಹಿತ್ಯದತ್ತ ಒಲುವು ಹೆಚ್ಚಾಗುತ್ತಿದೆ. ಚುಟುಕು ಕವನಗಳಲ್ಲಿ ಸಮಾಜದ ಅಂಕು-ಡೊಂಕು ತಿದ್ದುವ ತಾಕತ್ತು ಇದೆ ಎಂದು ಅಭಿಪ್ರಾಯಪಟ್ಟರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಸಿನ್ನೂರ, ಸದಸ್ಯರಾದ ಟಿ. ನಿಂಗಣ್ಣ, ಮೂಗಲಪ್ಪ ನಾಯ್ಕಿನ್, ಮರೆಪ್ಪ , ಅಕ್ಬರ್ ಹೋಟಗಿ, ಶಂಕರ , ಕವಿತಾ ಹಳ್ಳಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.