ಸುರಪುರ: ರಾಜಯೋಗ ಧ್ಯಾನ ಅದ್ಭುತವಾದದ್ದು. ಈ ಯೋಗ ಮಾನವನನ್ನು ಒತ್ತಡ ಮುಕ್ತಗೊಳಿಸಿ, ಶಾಂತಿ, ನೆಮ್ಮದಿಯ ಬದುಕಿಗೆ ಕೊಂಡೊಯ್ಯುತ್ತದೆ. ಅಧ್ಯಾತ್ಮ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಮನುಷ್ಯ ಭೌತಿಕವಾಗಿ, ಲೌಕಿಕವಾಗಿ ಪರಿವರ್ತನೆಯಾಗಬೇಕು. ಅಧ್ಯಾತ್ಮ ಶಿಕ್ಷಣ ಸ್ವಯಂ ಜಾಗೃತಿ ಮೂಡಿಸುತ್ತದೆ ಎಂದು ಮುಂಬಯಿನ ಹಿರಿಯ ರಾಜಯೋಗ ಧ್ಯಾನ ತರಬೇತುದಾರ ರಾಜಯೋಗಿ ಬಿ. ಕೆ. ಸ್ವಾಮಿನಾಥನ್ ಪ್ರತಿಪಾದಿಸಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ `ದೇವತೀರ್ಥ~ದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒತ್ತಡ ನಿರ್ವಹಣೆಯ ಬಗ್ಗೆ ಅವರು ತರಬೇತಿ ನೀಡಿದರು.ಜಗತ್ತಿನ ಪ್ರತಿಯೊಬ್ಬ ವ್ಯಕ್ತಿ ಇಂದು ಧಾವಂತದ ಬದುಕು ಸಾಗಿಸುತ್ತಿದ್ದಾನೆ. ಕೇವಲ ಹಣ ಗಳಿಕೆಯೊಂದೆ ಜೀವನದ ಗುರಿ ಎಂದು ತಿಳಿದಿದ್ದಾನೆ. ಆತನಿಗೆ ಸಮಯ ಸಾಲುತ್ತಿಲ್ಲ. ಜೀವನ ಎಗ್ಗಿಲ್ಲದೆ ಓಡುತ್ತಿದೆ. ಇದರಿಂದ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಒತ್ತಡದ ಬದುಕಿನಲ್ಲಿ ನಶಿಸಿಹೋಗುತ್ತಿದ್ದಾನೆ ಎಂದು ವಿಷಾದಿಸಿದರು.
ವಿವಿಧ ಕಥೆಗಳ ಮೂಲಕ ಆತ್ಮ ಪರಮಾತ್ಮನ ಸಂಬಂಧದ ಬಗ್ಗೆ ಮನಮುಟ್ಟುವಂತೆ ತಿಳಿಸಿಕೊಟ್ಟ ಅವರು, ಆತ್ಮರೂಪಿ ಸಿಮ್ ಕಾರ್ಡ್ನ್ನು ಪರಮಾತ್ಮನೆಂಬ ವಿದ್ಯುತ್ನಿಂದ ಚಾರ್ಜ್ ಮಾಡಬೇಕು ಎಂದು ನುಡಿದರು.
ರಾಜಯೋಗ ಅಳವಡಿಸಿಕೊಳ್ಳಿ, ನಿತ್ಯವೂ ಧ್ಯಾನ ಮಾಡಿ, ದ್ವೇಷ, ಅಸೂಯೆ, ದುರಾಸೆ, ವ್ಯಾಮೋಹ, ಅಹಂಕಾರ ತ್ಯಜಿಸಿ. ಅಧ್ಯಾತ್ಮ ಚಿಂತನೆ ನಿಮ್ಮ ನಿತ್ಯದ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಿ. ಆಗ ನೋಡಿ ನಿಮ್ಮಲ್ಲಿ ಆಗುವ ಮಹತ್ತರ ಬದಲಾವಣೆ ಎಂದು ವಿವರಿಸಿದರು.
ಬಿ. ಕೆ. ಉಷಾ ಸ್ವಾಗತಿಸಿ, ಪರಿಚಯಿಸಿದರು. ರಾಜಯೋಗಿನಿ ಬಿ. ಕೆ. ವಿಜಯಾ, ಬಿ. ಕೆ. ಶಾಂತಾ, ಬಿ. ಕೆ. ರಾಗಿಣಿ ವೇದಿಕೆಯಲ್ಲಿದ್ದರು. ಹಲವಾರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸದ ಲಾಭ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.